ಬೆಂಗಳೂರಿನ ಪರಪ್ಪನ ಅಗ್ರಹಾರ, ಹರಳೂರು – ಕೂಡ್ಲು ದೊಡ್ಡ ಕೆರೆಗೆ ಆಯುಕ್ತರ ಭೇಟಿ: ಸಮಗ್ರ ಯೋಜನಾ ವರದಿಗೆ ಸೂಚನೆ..

ಬೆಂಗಳೂರಿನ ವಿವಿಧ ಭಾಗಗಳಲ್ಲಿ ಮಳೆ ಮುಂದುವರಿದಿದೆ. ಇದೀಗ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಪ್ರಾಧಿಕಾರ ವ್ಯಾಪ್ತಿಯಲ್ಲಿ ಕೆರೆ ನೀರಿನ ಸಂರಕ್ಷಣೆ ಹಾಗೂ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಆಯುಕ್ತರಾದ ಕೆ.ಎನ್. ರಮೇಶ್ ಅವರು ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಬೊಮ್ಮನಹಳ್ಳಿ ವಲಯ ವ್ಯಾಪ್ತಿಯಲ್ಲಿ ಬರುವ ಕೆರೆಗಳಾದ ಪರಪ್ಪನ ಅಗ್ರಹಾರ ಕೆರೆ, ಹರಳೂರು ಕೆರೆ ಹಾಗೂ ಕೂಡ್ಲು ದೊಡ್ಡ ಕೆರೆಗಳನ್ನು ಪರಿಶೀಲನೆ ಮಾಡಿದ್ದು, ಭೇಟಿ ನೀಡಿ ಕೆರೆಗಳ ಸಮಗ್ರ ಅಭಿವೃದ್ಧಿ ಪರಿಶೀಲನೆ ನಡೆಸಿದ್ದಾರೆ. ಕೆರೆಗಳ ಪರಿಶೀಲನೆ ವೇಳೆ ತ್ಯಾಜ್ಯ ನೀರನ್ನು ಕೆರೆಗಳಿಗೆ ಬಿಟ್ಟಿರುವುದರಿಂದ ಕೆರೆ ನೀರಿಗೆ ತ್ಯಾಜ್ಯ ನೀರು ವಿಲೀನಗೊಂಡು ಕೆರೆ ನೀರು ಸಹ ಕಲುಷಿತ ಗೊಂಡಿರುವುದನ್ನು ಗಮನಿಸಿದ ಆಯುಕ್ತರು, ತ್ಯಾಜ್ಯ ನೀರು ಕೆರೆ ನೀರಿಗೆ ವಿಲೀನಗೊಳ್ಳದಂತೆ ತಡೆಯನ್ನು ನಿರ್ಮಿಸಿ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

 

ಕೆರೆಯ ಸುತ್ತ ಮುತ್ತ ಪ್ರದೇಶಗಳ ಯು.ಜಿ.ಡಿ. ಕಾಮಗಾರಿಗೆ ವೇಗ

ಇನ್ನು ಈ ಕೆರೆಗಳಿಗೆ ಹರಿಬಿಡುತ್ತಿರುವ ತ್ಯಾಜ್ಯ ನೀರನ್ನು ತಡೆಗಟ್ಟುವ ದೃಷ್ಟಿಯಿಂದ BWSSB ವತಿಯಿಂದ ಕೈಗೊಂಡಿರುವ ಒಳಚರಂಡಿ ಪೈಪ್ ಲೈನ್ ಅಳವಡಿಸುವ ಕಾಮಗಾರಿಗೆ ವೇಗ ನೀಡಿ, ಯುಜಿಡಿ ಕಾಮಗಾರಿಯನ್ನು ತುರ್ತಾಗಿ ಪೂರ್ಣಗೊಳಿಸುವಂತೆ ಬಿಡ್ಲ್ಯೂಎಸ್‌ಎಸ್‌ಬಿ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ದೂರವಾಣಿ ಮುಖಾಂತರ ಸೂಚನೆ ನೀಡಿದರು. ಈ ಕುರಿತಂತೆ ಜಲಮಂಡಳಿಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಕೆರೆ ಸಂರಕ್ಷಣೆಗೆ ಕ್ರಮ ಕೈಗೊಳುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಪರಪ್ಪನ ಅಗ್ರಹಾರ, ಹರಳೂರು ಹಾಗೂ ಕೂಡ್ಲು ದೊಡ್ಡ ಕೆರೆಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ, ಕೆರೆಗೆ ತಂತಿ ಬೇಲಿ ಅಳವಡಿಕೆ, ತಡೆಗೋಡೆ ನಿರ್ಮಾಣ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ಸಂಬಂಧ ಸಮಗ್ರ ಯೋಜನಾ ವರದಿ ಸಿದ್ದಪಡಿಸಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಆಯುಕ್ತರು ಸೂಚನೆ ನೀಡಿದ್ದಾರೆ.

 

Bengaluru

ಈ ವೇಳೆ ಮುಖ್ಯ ಎಂಜಿನಿಯರರಾದ ಕೆ.ವಿ. ರವಿ, ಕಾರ್ಯಪಾಲಕ ಎಂಜಿನಿಯರರಾದ ದೀಪಾ ಹಾಗೂ ಉಷಾ ಸೇರಿದಂತೆ ಹಲವರು ಇದ್ದರು.

 

ಅಪಾಯಕಾರಿ ಮರಗಳ ತೆರವಿಗೆ ಸೂಚನೆ

ಇನ್ನು ಬೆಂಗಳೂರಿನ ಉತ್ತರ ನಗರ ಪಾಲಿಕೆಯ ವ್ಯಾಪ್ತಿಯಲ್ಲಿಯೂ ಮಳೆಗಾಲಕ್ಕೆ ಸಂಬಂಧಿಸಿದಂತೆ ಕೆಲವೊಂದು ಸೂಚನೆಗಳನ್ನು ಕೊಡಲಾಗಿದೆ. ಮಳೆಗಾಲ ಆಗಿರುವುದರಿಂದ ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಅಪಾಯಕಾರಿ ಮರಗಳು, ಮಳೆಗೆ ಧರೆಗುರುಳಿದ ಮರಗಳು ಹಾಗೂ ಅಪಾಯಕಾರಿಯಾಗಿ ವಾಲಿರುವ ರೆಂಬೆ-ಕೊಂಬೆಗಳ ತೆರವು ಕಾರ್ಯಗಳ ಪ್ರಗತಿ ಪರಿಶೀಲನೆಗಾಗಿ ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಜೂನ್ 1ರ ಸೋಮವಾರ ವಿಡಿಯೋ ಸಂವಾದ ಸಭೆ ನಡೆಸಲಾಯಿತು.

 

ಆಯುಕ್ತರು ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬಿದ್ದಿರುವ ಮರಗಳು, ಅಪಾಯಕಾರಿ ರೆಂಬೆ-ಕೊಂಬೆಗಳು, ಈಗಾಗಲೇ ತೆರವುಗೊಳಿಸಿರುವ ಪ್ರಕರಣಗಳು ಹಾಗೂ ಇನ್ನೂ ಕಾರ್ಯಾಚರಣೆಗೆ ಒಳಪಡಬೇಕಿರುವ ಮರಗಳು ಮತ್ತು ರೆಂಬೆ-ಕೊಂಬೆಗಳ ಕುರಿತು ವಿಸ್ತೃತ ಮಾಹಿತಿ ಪಡೆದರು. ಮಳೆ ಹಾಗೂ ಗಾಳಿಯಿಂದ ಅಪಾಯ ಉಂಟುಮಾಡುವ ಮರಗಳು ಮತ್ತು ರೆಂಬೆ-ಕೊಂಬೆಗಳನ್ನು ಆದ್ಯತೆ ಮೇರೆಗೆ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಆಯುಕ್ತರು, ಕೇವಲ ಮರ ಅಥವಾ ರೆಂಬೆ-ಕೊಂಬೆಗಳನ್ನು ಕತ್ತರಿಸುವುದಷ್ಟೇ ಅಲ್ಲದೆ, ಸ್ಥಳದಲ್ಲಿ ಬಿದ್ದಿರುವ ಮರದ ಅವಶೇಷಗಳು, ಕೊಂಬೆಗಳು ಹಾಗೂ ಇತರೆ ತ್ಯಾಜ್ಯವನ್ನು ಸಂಪೂರ್ಣವಾಗಿ ತೆರವುಗೊಳಿಸಿ ಸ್ಥಳವನ್ನು ಸ್ವಚ್ಛವಾಗಿರಿಸುವಂತೆ ನಿರ್ದೇಶನ ನೀಡಿದರು.

 

ಕಾರ್ಯಾಚರಣೆಯನ್ನು ಇನ್ನಷ್ಟು ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ನಿರ್ವಹಿಸುವ ಉದ್ದೇಶದಿಂದ ಈಗಾಗಲೇ ಹೆಚ್ಚುವರಿ ತಂಡಗಳನ್ನು ನಿಯೋಜಿಸಲಾಗಿದ್ದು, ಅಗತ್ಯವಿದ್ದಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು. ಅದೇ ರೀತಿ ಕಾರ್ಯಾಚರಣೆಗಳಿಗೆ ಅಗತ್ಯವಿರುವ ಆಧುನಿಕ ಉಪಕರಣಗಳು ಹಾಗೂ ಯಂತ್ರೋಪಕರಣಗಳ ಕೊರತೆ ಕಂಡುಬಂದಲ್ಲಿ ಅವುಗಳನ್ನು ತಕ್ಷಣ ಖರೀದಿಸಿ ಬಳಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು. ನಗರದ ವಿವಿಧ ಭಾಗಗಳಲ್ಲಿ ಸಾರ್ವಜನಿಕರ ಸುರಕ್ಷತೆ ಹಾಗೂ ಸುಗಮ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ಅಪಾಯಕಾರಿ ಮರಗಳು ಮತ್ತು ರೆಂಬೆ-ಕೊಂಬೆಗಳ ತೆರವು ಕಾರ್ಯವನ್ನು ನಿರಂತರವಾಗಿ ಕೈಗೊಳ್ಳುವಂತೆ ಆಯುಕ್ತರು ಸೂಚಿಸಿದ್ದಾರೆ.

   SHARE  

Facebook
Twitter
Telegram
WhatsApp

   TOP NEWS  

   RECENT NEWS