ಒಡಿಶಾದ ಪ್ಯಾರದೀಪ್ ಕರಾವಳಿಯಿಂದ ಸುಮಾರು 240 ನಾಟಿಕಲ್ ಮೈಲು (444 ಕಿ.ಮೀ.) ದೂರದಲ್ಲಿರುವ ಬಂಗಾಳ ಕೊಲ್ಲಿಯಲ್ಲಿ ಶನಿವಾರ ಪನಾಮ ಧ್ವಜ ಹೊಂದಿದ್ದ ಸರಕು ಹಡಗು ಮುಳುಗಡೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಡಗಿನಲ್ಲಿ ಒಟ್ಟು 24 ಸಿಬ್ಬಂದಿ ಇದ್ದರು ಎಂದು ತಿಳಿದುಬಂದಿದೆ.
ಹಡಗು ಕಬ್ಬಿಣದ ಅದಿರು ಸರಕುಗಳನ್ನು ಹೊತ್ತುಕೊಂಡು ಒಡಿಶಾದಿಂದ ಸಿಂಗಾಪುರದತ್ತ ಪ್ರಯಾಣಿಸುತ್ತಿತ್ತು. ಮುಂದಿನ ಪ್ರಯಾಣ ಆರಂಭಿಸುವ ಮೊದಲು ಆಗಸ್ಟ್ 20ರಂದು ಹಡಗು ಪ್ಯಾರದೀಪ್ ಕರಾವಳಿಗೆ ತಲುಪಿತ್ತು. ಬಳಿಕ ಅಲ್ಲಿಂದ ಸಿಂಗಾಪುರದತ್ತ ತೆರಳುತ್ತಿದ್ದ ವೇಳೆ ಸಮುದ್ರದಲ್ಲಿ ಮುಳುಗಡೆಯಾಗಿದೆ.
ಹಡಗು ಮುಳುಗಡೆಯಾದ ಮಾಹಿತಿ ಲಭ್ಯವಾಗುತ್ತಿದ್ದಂತೆ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ. ಹಡಗಿನಲ್ಲಿದ್ದ 24 ಸಿಬ್ಬಂದಿಯ ಸುರಕ್ಷತೆ ಕುರಿತು ಅಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದು, ಮುಳುಗಡೆಯಾದ ಹಡಗಿಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ.










