ರಾಷ್ಟ್ರೀಯ ಜನತಾ ದಳ (RJD) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಹಿರಿಯ ಪುತ್ರ ಹಾಗೂ ಜನಶಕ್ತಿ ಜನತಾ ದಳ (JJD) ಮುಖ್ಯಸ್ಥ ತೇಜ್ ಪ್ರತಾಪ್ ಯಾದವ್ ಬಿಹಾರ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದಾರೆ. ತಮ್ಮ ಹಾಗೂ ತಮ್ಮ ತಂದೆ ಲಾಲು ಪ್ರಸಾದ್ ಯಾದವ್ ಅವರ ಹತ್ಯೆಗೆ ತಮ್ಮ ಮಾಜಿ ಆಪ್ತ ಆಕಾಶ್ ಯಾದವ್ ಸಂಚು ರೂಪಿಸಿದ್ದಾರೆ ಎಂದು ತೇಜ್ ಪ್ರತಾಪ್ ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ಅವರು ಪಾಟ್ನಾದಲ್ಲಿ ಪೊಲೀಸ್ ದೂರು ದಾಖಲಿಸಿದ್ದು, ಆಕಾಶ್ ಯಾದವ್, ಅವರ ಸಹೋದರಿ ಅನುಷ್ಕಾ ಯಾದವ್ ಸೇರಿದಂತೆ ಒಟ್ಟು ಎಂಟು ಜನರ ವಿರುದ್ಧ ಎಫ್ಐಆರ್ (FIR) ದಾಖಲಾಗಿದೆ.
ಆಕಾಶ್ ಯಾದವ್ ಮತ್ತು ಅವರ ಬೆಂಬಲಿಗರು ವಿರೋಧ ಪಕ್ಷಗಳೊಂದಿಗೆ ಕೈಜೋಡಿಸಿ ತಮಗೆ ಹಾಗೂ ತಮ್ಮ ತಂದೆಗೆ ಪ್ರಾಣಾಪಾಯ ಉಂಟುಮಾಡಲು ಪ್ಲಾನ್ ಮಾಡಿದ್ದಾರೆ ಎಂದು ತೇಜ್ ಪ್ರತಾಪ್ ದೂರಿದ್ದಾರೆ. ರಾಜಕೀಯವಾಗಿ ತಮ್ಮ ಪ್ರತಿಷ್ಠೆಯನ್ನು ಹಾಳು ಮಾಡಲು ಈ ತಂಡ ನಿರಂತರವಾಗಿ ಯತ್ನಿಸುತ್ತಿದೆ ಎಂದು ಆರೋಪಿಸಿರುವ ಅವರು, ತಕ್ಷಣವೇ ತಮಗೆ ಮತ್ತು ತಂದೆ ಲಾಲು ಪ್ರಸಾದ್ ಯಾದವ್ ಅವರಿಗೆ ಸೂಕ್ತ ಹಾಗೂ ಹೆಚ್ಚುವರಿ ಭದ್ರತೆ ಒದಗಿಸಬೇಕು ಎಂದು ಬಿಹಾರ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರಿಗೆ ಅಧಿಕೃತವಾಗಿ ಮನವಿ ಮಾಡಿದ್ದಾರೆ.
ಇದೇ ದೂರಿನಲ್ಲಿ ಉಲ್ಲೇಖವಾಗಿರುವ ಅನುಷ್ಕಾ ಯಾದವ್ ಹೆಸರಿನ ಹಿಂದೆ ಹಳೆಯ ಕುಟುಂಬ ಕಲಹದ ಹಿನ್ನೆಲೆ ಇದೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ತೇಜ್ ಪ್ರತಾಪ್ ಅವರು ಬೇರೊಬ್ಬ ಮಹಿಳೆಯನ್ನು ವಿವಾಹವಾಗಿದ್ದಾಗ, ಅನುಷ್ಕಾ ಜೊತೆಗಿನ ಸಂಬಂಧದ ಕುರಿತು ಕೆಲವು ಆರೋಪಗಳು ಕೇಳಿಬಂದಿದ್ದವು. ಈ ಕೌಟುಂಬಿಕ ಮತ್ತು ರಾಜಕೀಯ ಬೆಳವಣಿಗೆಗಳ ನಂತರ ತಂದೆ ಲಾಲು ಪ್ರಸಾದ್ ಯಾದವ್ ಅವರು ತೇಜ್ ಪ್ರತಾಪ್ ಅವರನ್ನು ಆರ್ಜೆಡಿ (RJD) ಪಕ್ಷದಿಂದ ಹೊರಹಾಕಿದ್ದರು. ಆ ಬಳಿಕ ತೇಜ್ ಪ್ರತಾಪ್ ತಮ್ಮದೇ ಆದ ‘ಜನಶಕ್ತಿ ಜನತಾ ದಳ’ ಸಂಘಟನೆಯನ್ನು ಮುನ್ನಡೆಸುತ್ತಿದ್ದು, ಈಗಿನ ಹತ್ಯೆ ಸಂಚಿನ ಆರೋಪ ಬಿಹಾರದ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.










