ತನಿಷಾ ಕುಪ್ಪಂಡ ನಟನೆಯ ಹೊಸ ಚಿತ್ರಕ್ಕೆ ಮುಹೂರ್ತ: ಕುತೂಹಲ ಮೂಡಿಸಿದ ’KA-18’

ಕನ್ನಡ ಚಿತ್ರರಂಗದಲ್ಲಿ ವಿನೂತನ ಶೀರ್ಷಿಕೆಗಳ ಸಿನಿಮಾಗಳು ಸದಾ ಗಮನ ಸೆಳೆಯುತ್ತವೆ. ಆ ಸಾಲಿಗೆ ಈಗ ’KA-18’ ಚಿತ್ರ ಸೇರ್ಪಡೆಯಾಗಿದೆ. ಬಿಗ್ ಬಾಸ್ ಖ್ಯಾತಿಯ ನಟಿ ತನಿಷಾ ಕುಪ್ಪಂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಈ ಹೊಸ ಸಿನಿಮಾದ ಮುಹೂರ್ತ ಸಮಾರಂಭವು ಬೆಂಗಳೂರಿನ ಶ್ರೀ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ನೆರವೇರಿತು. ಚಿತ್ರದ ಮೊದಲ ದೃಶ್ಯಕ್ಕೆ ಹಿರಿಯ ಸಾಹಿತಿ ಹಾಗೂ ನಿರ್ದೇಶಕ ಡಾ. ವಿ. ನಾಗೇಂದ್ರ ಪ್ರಸಾದ್ ಕ್ಲಾಪ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಳಿಯ, ನಟ ಮನೋಜ್ ಕ್ಯಾಮೆರಾ ಆನ್ ಮಾಡಿದರು.

ಈ ಚಿತ್ರವನ್ನು ‘ಅಪ್ಪಾಜಿ ಪ್ರೊಡಕ್ಷನ್ಸ್’ ಬ್ಯಾನರ್ ಅಡಿಯಲ್ಲಿ ಚಿಕ್ಕಮಗಳೂರು ಹಿರೇಮಗಳೂರು ಮೂಲದ ಎ.ಟಿ.ಎಂ. ಮಂಜು ಅವರು ನಿರ್ಮಾಣ ಮಾಡುತ್ತಿದ್ದು, ಜೊತೆಗೆ ತಾವೇ ಸ್ವತಃ ನಾಯಕನಾಗಿಯೂ ಬಣ್ಣ ಹಚ್ಚುತ್ತಿದ್ದಾರೆ. ಮೋಹನ್ ಚಿಕ್ಕಿ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಇದು ಅವರ ನಿರ್ದೇಶನದ ಮೂರನೇ ಸಿನಿಮಾವಾಗಿದೆ. ಚಿತ್ರದಲ್ಲಿ ಎ.ಟಿ.ಎಂ. ಮಂಜು, ತನಿಷಾ ಕುಪ್ಪಂಡ ಮತ್ತು ‘ಉತ್ತರಕಾಂಡ’ ಚಿತ್ರ ಖ್ಯಾತಿಯ ಸೋನಿಯಾ ರಾವುತ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸೋನಿಯಾ ರಾವುತ್ ಈ ಚಿತ್ರದ ಸಹ ನಿರ್ಮಾಪಕಿಯೂ ಆಗಿದ್ದು, ಹಾಡೊಂದಕ್ಕೆ ಹೆಜ್ಜೆ ಕೂಡ ಹಾಕುತ್ತಿದ್ದಾರೆ. ದೀಪು ಈ ಚಿತ್ರದಲ್ಲಿ ಖಳನಾಯಕನಾಗಿ ನಟಿಸುತ್ತಿದ್ದು, ಇವರೊಂದಿಗೆ ವರ್ಧನ್, ವಿಜಿ, ಪೂಜಾ ಮುಂತಾದವರು ತಾರಾಗಣದಲ್ಲಿದ್ದಾರೆ.

ಚಿತ್ರದ ಕಥಾಹಂದರ ಹಾಗೂ ಚಿತ್ರೀಕರಣದ ಬಗ್ಗೆ ಮಾಹಿತಿ ಹಂಚಿಕೊಂಡ ನಿರ್ದೇಶಕ ಮೋಹನ್ ಚಿಕ್ಕಿ, ಈ ಸಿನಿಮಾವು ಕೇವಲ ಎರಡು ಪ್ರಮುಖ ಪಾತ್ರಗಳ ಸುತ್ತ, ಒಂದು ಸಾಯಂಕಾಲ 6 ಗಂಟೆಯಿಂದ ಮರುದಿನ ಮುಂಜಾನೆ 6 ಗಂಟೆಯವರೆಗೆ ನಡೆಯುವ ರೋಮಾಂಚಕ ಘಟನೆಯಾಗಿದೆ ಎಂದು ತಿಳಿಸಿದರು. ನಟಿ ತನಿಷಾ ಕುಪ್ಪಂಡ ಮಾತನಾಡಿ, ತಾವು ಈ ಚಿತ್ರದಲ್ಲಿ ‘ಅಂಕಿತಾ’ ಎಂಬ ಪಾತ್ರ ಮಾಡುತ್ತಿರುವುದಾಗಿ, ಕಾಡಿನ ದಾರಿಯಲ್ಲಿ ಅಪರಿಚಿತ ವ್ಯಕ್ತಿಯೊಂದಿಗೆ ಪಯಣಿಸುವಾಗ ಎದುರಾಗುವ ಸಣ್ಣಪುಟ್ಟ ಪರಿಣಾಮಗಳು ಮತ್ತು ಯಾರು ಯಾರಿಗೆ ಒಳ್ಳೆಯದು ಅಥವಾ ಕೆಟ್ಟದ್ದು ಮಾಡುತ್ತಾರೆ ಎಂಬ ಅಂಶಗಳ ಸುತ್ತ ಕಥೆ ಸಾಗಲಿದೆ ಎಂದರು. ಚಿತ್ರದ ಸಂಪೂರ್ಣ ಚಿತ್ರೀಕರಣವನ್ನು ಚಿಕ್ಕಮಗಳೂರಿನ ಸುಂದರ ಹಾಗೂ ನಿಗೂಢ ತಾಣಗಳಲ್ಲಿ ಒಂದೇ ಹಂತದಲ್ಲಿ ಮುಗಿಸಲು ಚಿತ್ರತಂಡ ಯೋಜಿಸಿದೆ.

   SHARE  

Facebook
Twitter
Telegram
WhatsApp

   TOP NEWS  

   RECENT NEWS