ಕರ್ನಾಟಕ ರಾಜಕಾರಣದ ‘ಟ್ರಬಲ್ ಶೂಟರ್’ ಡಿ.ಕೆ.ಶಿವಕುಮಾರ್ ಅವರ ರಾಜಕೀಯ ಜೀವನದ ಬಹುದೊಡ್ಡ ಕನಸು ನನಸಾಗುವ ಕಾಲ ಇಂದು ಕೂಡಿಬಂದಿದೆ. ಅವರು ರಾಜ್ಯದ ಅತ್ಯುನ್ನತ ಮುಖ್ಯಮಂತ್ರಿ ಪೀಠ ಅಲಂಕರಿಸುತ್ತಿದ್ದಾರೆ. ಇದರ ನಡುವೆ ಕಳೆದ ಕೆಲವು ವರ್ಷಗಳಿಂದ ಇಡೀ ರಾಜ್ಯದಲ್ಲಿ ಭಾರಿ ಕುತೂಹಲ ಮೂಡಿಸಿದ್ದ ಅವರ ‘ಗಡ್ಡದ ರಹಸ್ಯ’ ಮತ್ತು ಅದರ ಹಿಂದಿನ ಶಪಥದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ದೊಡ್ಡ ಚರ್ಚೆ ಶುರುವಾಗಿದೆ. ಸದನದ ಒಳಗೂ-ಹೊರಗೂ ಸ್ವಾರಸ್ಯಕರ ಚರ್ಚೆಗಳಿಗೆ ಗ್ರಾಸವಾಗಿದ್ದ ಡಿಕೆಶಿಯವರ ಈ ವಿಭಿನ್ನ ಲುಕ್ನ ಹಿನ್ನೆಲೆ ಮತ್ತು ಶಪಥದ ಸಂಪೂರ್ಣ ವಿವರ ಇಲ್ಲಿದೆ.
ಯಾವಾಗಲೂ ಕ್ಲೀನ್ ಶೇವ್ ರೂಪದಲ್ಲೇ ಕಾಣಿಸಿಕೊಳ್ಳುತ್ತಿದ್ದ ಡಿ.ಕೆ.ಶಿವಕುಮಾರ್ ಅವರು 2019ರಲ್ಲಿ ಇಡಿ (ED) ಬಂಧನಕ್ಕೆ ಒಳಗಾಗಿ ತಿಹಾರ್ ಜೈಲು ಸೇರಬೇಕಾಗಿ ಬಂದಾಗ ಗಡ್ಡ ಬಿಡಲು ಆರಂಭಿಸಿದ್ದರು. ಆ ವರ್ಷದ ಅಕ್ಟೋಬರ್ 23ರಂದು ಜೈಲಿನಿಂದ ಹೊರಬಂದ ಅವರು, “ನನ್ನ ಶಪಥ ಈಡೇರುವವರೆಗೂ ನಾನು ಕ್ಲೀನ್ ಶೇವ್ ಮಾಡುವುದಿಲ್ಲ” ಎಂದು ಪಣ ತೊಟ್ಟಿದ್ದರು.
ತಿಹಾರ್ ಜೈಲಿನ ನಂಟು
ತಿಹಾರ್ ಜೈಲಿನಿಂದ ಬಿಡುಗಡೆಯಾದ ದಿನದಿಂದಲೂ ಡಿ.ಕೆ.ಶಿವಕುಮಾರ್ ಅವರು ಗಡ್ಡ ಬಿಡಲು ಆರಂಭಿಸಿದ್ದರು. ಮಾಧ್ಯಮಗಳು ಈ ಬದಲಾದ ಲುಕ್ನ ಹಿಂದಿನ ಉದ್ದೇಶದ ಬಗ್ಗೆ ಪ್ರಶ್ನೆ ಮಾಡಿದಾಗಲೆಲ್ಲಾ ಅವರು ಕೇವಲ ಮಂದಹಾಸ ಬೀರಿ ಸುಮ್ಮನಾಗುತ್ತಿದ್ದರೇ ವಿನಃ ಯಾವುದೇ ರಹಸ್ಯ ಬಿಟ್ಟುಕೊಡುತ್ತಿರಲಿಲ್ಲ. ಆದರೆ, ಆಂತರಿಕ ವಲಯದಲ್ಲಿ ಇದು ‘ಸಿಎಂ ಗಾದಿ’ಗಾಗಿಯೇ ಮಾಡಿರುವ ಶಪಥ ಎಂಬ ಮಾತುಗಳು ಬಲವಾಗಿ ಕೇಳಿಬರುತ್ತಿದ್ದವು. ಈ ಗಡ್ಡದ ವಿಷಯ ಕೇವಲ ಸಾಮಾಜಿಕ ಜಾಲತಾಣಗಳಿಗಷ್ಟೇ ಸೀಮಿತವಾಗದೆ, ವಿಧಾನಸಭೆಯ ಸದನದ ಒಳಗೂ ಸ್ವಾರಸ್ಯಕರ ಚರ್ಚೆಗಳಿಗೆ ವೇದಿಕೆಯಾಗಿತ್ತು.










