ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಜೀವನಾಡಿಯಾದ ಟಿಬಿ ಡ್ಯಾಮ್ನಲ್ಲಿ ಸುಮಾರು 34 ಟಿಎಂಸಿಯಷ್ಟು ಹೂಳು ತುಂಬಿರುವುದರಿಂದ ನೀರಿನ ಸಂಗ್ರಹ ಕಡಿಮೆಯಾಗಿದೆ. ಆದ್ದರಿಂದ ನವಲಿ ಸಮಾನಾಂತರ ಜಲಾಶಯದ ಅಗತ್ಯವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (BY Vijayendra) ಹೇಳಿದ್ದಾರೆ.
5ನೇ ದಿನದ ಬಳ್ಳಾರಿ ಚಲೋ ಪಾದಯಾತ್ರೆ ಅಂಗವಾಗಿ ಇಂದು ನವಲಿ ಜಲಾಶಯದ ವ್ಯಾಪ್ತಿಯಲ್ಲಿನ ರೈತರ ಜೊತೆ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಅವರು ನವಲಿ ಜಲಾಶಯ ನಿರ್ಮಾಣಕ್ಕೆ ಆಲೋಚನೆ ಮಾಡಿದ್ದರು. ಆನಂತರ ಯಾವುದೇ ಕ್ರಮಗಳು ಆಗಲೇ ಇಲ್ಲ ಎಂದಿದ್ದಾರೆ.
ಕಾರ್ಯರೂಪಕ್ಕೆ ತರಲು ಒತ್ತಾಯ
ಸಮಾನಾಂತರ ಜಲಾಶಯದ ಬಗ್ಗೆ ರಾಜ್ಯ ಸರ್ಕಾರ ತೀರ್ಮಾನ ಮಾಡಿ ಬಜೆಟ್ನಲ್ಲಿ ಹಣ ಇಡಬೇಕಿತ್ತು. ಇಲ್ಲದಿದ್ದರೆ ಬರದ ಸಂದರ್ಭದಲ್ಲಿ ರೈತರಿಗೆ ನೀರಿಲ್ಲದೆ ತೊಂದರೆಯಾಗಲಿದೆ. ಕೇವಲ ಘೋಷಣೆ ಮಾಡಿದರೆ ಸಾಲದು ಬದಲಿಗೆ ಯೋಜನೆ ಕಾರ್ಯರೂಪಕ್ಕೆ ಬರಬೇಕು. ಕಳೆದ ಬಾರಿ ತುಂಗಾಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಕೊಚ್ಚಿ ಹೋಗಿ ಅಪಾರ ಪ್ರಮಾಣದ ನೀರು ಪೋಲಾಯಿತು. ಗೇಟ್ ರಿಪೇರಿಗೆ ಸರ್ಕಾರ ಎರಡು ವರ್ಷ ತೆಗೆದುಕೊಂಡಿತು. ಇಂತಹ ಸಂದರ್ಭದಲ್ಲಿ ನವಲಿ ಜಲಾಶಯದಂತಹ ಪರ್ಯಾಯ ವ್ಯವಸ್ಥೆ ಇದ್ದರೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.
ಸ್ವಾರ್ಥಕೋಸ್ಕರ ನವಲಿ ಜಲಾಶಯಕ್ಕೆ ಮುಂದಾಗಿದ್ದಾರೆ ಎಂದು ಕೆಲವರು ಹೇಳುತ್ತಾರೆ. ಇದರಲ್ಲಿ ರಾಜಕೀಯ ಬೇಡ. ಸಮಾನಾಂತರ ಜಲಾಶಯ ಬೇಕೋ ಅಥವಾ ಟಿಬಿ ಡ್ಯಾಮ್ನ ಹೂಳು ತೆಗೆಯಬಹುದೊ ಎಂಬುದರ ಬಗ್ಗೆ ವೈಜ್ಞಾನಿಕವಾಗಿ ಅಧ್ಯಯನ ನಡೆಸಬೇಕು. ಜಲಾಶಯದಲ್ಲಿ ನೀರು ಇದ್ದಾಗ ಹೂಳು ತೆಗೆಯಲು ಆಗುವುದಿಲ್ಲ. ನೀರು ಇಲ್ಲದಿದ್ದಾಗ ಹೂಳು ತೆಗೆಯಬಹುದು. ಯೋಜನೆ ಬಗ್ಗೆ ರೈತ ಮುಖಂಡರಲ್ಲಿ ಗೊಂದಲ ಬೇಡ ಎಂದು ತಿಳಿಸಿದ್ದಾರೆ.
ಜಲಾಶಯದ ಹೂಳು ತೆಗೆಯಲು ತಂತ್ರಜ್ಞಾನ ಇದೆ ಎಂದು ಹೇಳುತ್ತಾರೆ. ಆದರೆ ದೊಡ್ಡ ಪ್ರಮಾಣದ ಹೂಳು ತೆಗೆಯುವುದು ಹೇಗೆ ಎಂಬ ಬಗ್ಗೆ ಪರಿಶೀಲನೆ ಮಾಡಬೇಕಿದೆ. ಈ ಬಗ್ಗೆ ಕೇಂದ್ರ ಸಚಿವರ ಜೊತೆ ಮಾತನಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.










