ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಗೃಹಜ್ಯೋತಿ’ ಫಲಾನುಭವಿಗಳ ದಾಖಲಾತಿ ಪರಿಶೀಲನೆ ಹಾಗೂ ಮಾಹಿತಿ ಸಂಗ್ರಹವು ನಿಧಾನ ಗತಿಯಲ್ಲಿ ಸಾಗುತ್ತಿದೆ. ಮೀಟರ್ ರೀಡರ್ಗಳು ಮನೆ ಮನೆಗೆ ತೆರಳಿ ಸರ್ವೇ ನಡೆಸುತ್ತಿದ್ದರೂ , ಈವರೆಗೆ ಕೇವಲ ಶೇ.50ರಷ್ಟು ಕುಟುಂಬಗಳ ಮಾಹಿತಿ ಮಾತ್ರ ಸಂಗ್ರಹವಾಗಿದೆ. ಶ್ರೀಮಂತರ ಅಸಹಕಾರ ಹಾಗೂ ಅಪಾರ್ಟ್ಮೆಂಟ್ಗಳಿಗೆ ಪ್ರವೇಶ ಸಿಗದಿರುವುದೇ ಸಿಬ್ಬಂದಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ರಾಜ್ಯದಲ್ಲಿ ಒಟ್ಟು 1.65 ಕೋಟಿ ಗೃಹಜ್ಯೋತಿ ಫಲಾನುಭವಿ ಕುಟುಂಬಗಳಿದ್ದು, ಜುಲೈ 29ರವರೆಗಿನ ಮಾಹಿತಿ ಪ್ರಕಾರ 84.84 ಲಕ್ಷ ಕುಟುಂಬಗಳ ದಾಖಲಾತಿ ಪರಿಶೀಲನೆಯಷ್ಟೇ ಮುಗಿದಿದೆ. ಆಗಸ್ಟ್ 31ರವರೆಗೆ ಮಾಹಿತಿ ಸಂಗ್ರಹಕ್ಕೆ ಕಾಲಾವಕಾಶ ನೀಡಲಾಗಿದೆ.
ಬಡವರಿಂದ ಸಹಕಾರ, ಶ್ರೀಮಂತರಿಂದ ಅಸಹಕಾರ
ಮಾಹಿತಿ ಸಂಗ್ರಹಕ್ಕಾಗಿ ಮನೆ ಮನೆಗೆ ತೆರಳುತ್ತಿರುವ ಮೀಟರ್ ರೀಡರ್ಗಳಿಗೆ ವಿಚಿತ್ರ ಅನುಭವಗಳಾಗುತ್ತಿವೆ. ಬಡವರು ಹಾಗೂ ಮಧ್ಯಮ ವರ್ಗದ ಗ್ರಾಹಕರು ಅಗತ್ಯ ದಾಖಲೆಗಳನ್ನ ನೀಡಿ ಸಹಕರಿಸುತ್ತಿದ್ದರೆ, ಶ್ರೀಮಂತರು ಹಾಗೂ ಅಪಾರ್ಟ್ಮೆಂಟ್ ವಾಸಿಗಳು ಸಿಬ್ಬಂದಿಯನ್ನ ಮನೆಯೊಳಗೆ ಸೇರಿಸುತ್ತಿಲ್ಲ ಎಂಬ ದೂರುಗಳು ಹೆಚ್ಚಾಗಿ ಕೇಳಿಬಂದಿವೆ.
Also Read
ಬೆಂಗಳೂರು ಪಾಲಿಕೆಯ ಹೊಸ ಪ್ಲ್ಯಾನ್: ಅನಾಥ ವಾಹನಗಳಿಗಾಗಿ ಪ್ರತಿ ಕ್ಷೇತ್ರದಲ್ಲೂ ಫೆನ್ಸಿಂಗ್ ಯಾರ್ಡ್ ನಿರ್ಮಾಣ
“ನಾವು ಈಗಾಗಲೇ ಯೋಜನೆಗೆ ನೋಂದಣಿ ಮಾಡಿಸಿದ್ದೇವೆ, ಈಗ ಮತ್ತೆ ಯಾಕೆ ದಾಖಲೆ ನೀಡಬೇಕು? ಪ್ಯಾನ್ ಕಾರ್ಡ್ ಯಾಕೆ ಕೊಡಬೇಕು?” ಎಂದು ಹಲವರು ಸಿಬ್ಬಂದಿಯೊಂದಿಗೆ ವಾಗ್ವಾದಕ್ಕೆ ಇಳಿಯುತ್ತಿದ್ದಾರೆ. ಅಪಾರ್ಟ್ಮೆಂಟ್ಗಳಲ್ಲಿ ಮಧ್ಯಾಹ್ನದ ವೇಳೆ ಯಾರೂ ಇರದ ಕಾರಣ ಸಂಜೆ ಭೇಟಿ ನೀಡಬೇಕಾದ ಅನಿವಾರ್ಯತೆ ಸಿಬ್ಬಂದಿಗೆ ಎದುರಾಗಿದೆ. ಒಬ್ಬ ಮೀಟರ್ ರೀಡರ್ಗೆ ದಿನಕ್ಕೆ 75 ಮನೆಗಳ ಗುರಿ ನೀಡಲಾಗಿದ್ದರೂ , ವಾಸ್ತವದಲ್ಲಿ 40 ರಿಂದ 50 ಮನೆಗಳ ಸರ್ವೇ ಮಾಡುವುದೇ ಕಷ್ಟವಾಗಿದೆ.
ಯಾವ ಕಂಪನಿಯಲ್ಲಿ ಎಷ್ಟು ಸರ್ವೇ ಪೂರ್ಣ?
ಬೆಸ್ಕಾಂ : 34,62,865
ಹೆಸ್ಕಾಂ : 20,23,682
ಮೆಸ್ಕಾಂ : 11,51,702
ಜೆಸ್ಕಾಂ: 10,30,917
ಸೆಸ್ಕಾಂ : 7,93,105
ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘ: 22,394
ಒಟ್ಟು ಸಂಗ್ರಹವಾದ ದಾಖಲೆಗಳು: 84,84,665
ಅನರ್ಹರಿಗೆ ಕೊಕ್ಕೆ ಬೀಳುವ ಆತಂಕ
ಪ್ರಸ್ತುತ ತಿಂಗಳಿಗೆ 200 ಯೂನಿಟ್ವರೆಗಿನ ವಿದ್ಯುತ್ ಬಳಕೆಗೆ ಉಚಿತ ಸೌಲಭ್ಯ ನೀಡಲಾಗುತ್ತಿದೆ. ಆದರೆ , ಈ ಹೊಸ ಪರಿಶೀಲನೆಯ ವೇಳೆ ಆಧಾರ್ ಕಾರ್ಡ್ , ಮತದಾರರ ಗುರುತಿನ ಚೀಟಿ, ಬಾಡಿಗೆ ಕರಾರು ಪತ್ರ ಹಾಗೂ ವಿದ್ಯುತ್ ಬಿಲ್ ನೀಡುವುದು ಕಡ್ಡಾಯವಾಗಿದೆ. ಸರ್ವೇ ಪೂರ್ಣಗೊಂಡ ಬಳಿಕ ರಾಜ್ಯದಲ್ಲಿ ಮತದಾನದ ಹಕ್ಕು ಹೊಂದಿಲ್ಲದವರು ಹಾಗೂ ಆದಾಯ ತೆರಿಗೆ ಪಾವತಿದಾರರನ್ನ ಯೋಜನೆಯಿಂದ ಕೈಬಿಡುವ ಸಾಧ್ಯತೆಯಿದ್ದು , ಇದು ಗ್ರಾಹಕರಲ್ಲಿ ಆತಂಕ ಸೃಷ್ಟಿಸಿದೆ.
ಸ್ಮಾರ್ಟ್ ಮೀಟರ್ಗಳಿಗೂ ತೀವ್ರ ಹಾಹಾಕಾರ
ಗೃಹಜ್ಯೋತಿ ಸರ್ವೇ ಗೊಂದಲದ ನಡುವೆಯೇ , ಬೆಸ್ಕಾಂ ವ್ಯಾಪ್ತಿಯಲ್ಲಿ ‘ಸ್ಮಾರ್ಟ್ ಮೀಟರ್’ಗಳ ತೀವ್ರ ಕೊರತೆ ಎದುರಾಗಿದೆ. 2400 ಚದರ ಅಡಿವರೆಗಿನ ಕಟ್ಟಡಗಳಿಗೆ ಓಸಿ ವಿನಾಯಿತಿ ನೀಡಿರುವುದರಿಂದ ಶಾಶ್ವತ ವಿದ್ಯುತ್ ಸಂಪರ್ಕಕ್ಕೆ ಬೇಡಿಕೆ ದಿಢೀರ್ ಹೆಚ್ಚಾಗಿದೆ. ಆದರೆ , ಬೇಡಿಕೆಗೆ ತಕ್ಕಂತೆ ಮೀಟರ್ ಪೂರೈಕೆ ಹಾಗೂ ಅಳವಡಿಕೆ ಕಾರ್ಯ ನಡೆಯುತ್ತಿಲ್ಲ.
ಸ್ಮಾರ್ಟ್ ಮೀಟರ್ ಗುತ್ತಿಗೆ ಪಡೆದಿರುವ ಏಜೆನ್ಸಿ ಬಳಿ ತಾಂತ್ರಿಕ ಸಿಬ್ಬಂದಿಯ ಕೊರತೆ ಹಾಗೂ ಸಾಫ್ಟ್ವೇರ್ ಸಮಸ್ಯೆ ಇರುವುದರಿಂದ ಗ್ರಾಹಕರು ಹಣ ಪಾವತಿಸಿದರೂ ಮೀಟರ್ ಸಿಗುತ್ತಿಲ್ಲ. ಇದರಿಂದ ಆಕ್ರೋಶಗೊಂಡ ವಿದ್ಯುತ್ ಗುತ್ತಿಗೆದಾರರು ಇತ್ತೀಚೆಗೆ ಮಳಿಗೆಗೆ ಬೀಗ ಜಡಿದು ಪ್ರತಿಭಟಿಸಿದ್ದು , ಬೆಸ್ಕಾಂ ಅಧಿಕಾರಿಗಳು ಕೂಡ ಸಿಬ್ಬಂದಿ ಕೊರತೆಯಿಂದ ವಿಳಂಬವಾಗುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ.










