ತಮಿಳು ಸೂಪರ್ಸ್ಟಾರ್ ಹಾಗೂ ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್ ಅವರ ಪುತ್ರ ಜೇಸನ್ ಸಂಜಯ್ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ತಮ್ಮ ಚೊಚ್ಚಲ ನಿರ್ದೇಶನದ ‘ಸಿಗ್ಮಾ’ ಚಿತ್ರದ ಬಿಡುಗಡೆಯ ಸಿದ್ಧತೆಯಲ್ಲಿರುವ ಜೇಸನ್, ಇತ್ತೀಚಿನ ಸಂದರ್ಶನದಲ್ಲಿ ನಟನೆಯ ಬದಲು ನಿರ್ದೇಶನವನ್ನು ಆಯ್ಕೆ ಮಾಡಿಕೊಂಡಿರುವ ಕಾರಣವನ್ನು ಬಹಿರಂಗಪಡಿಸಿದ್ದಾರೆ.
ಜೇಸನ್ ಸಂಜಯ್ ಅವರ ಪ್ರಕಾರ, ಅವರಿಗೆ ಆರಂಭದಿಂದಲೇ ಕ್ಯಾಮೆರಾ ಹಿಂದಿನ ಕೆಲಸಗಳತ್ತ ಹೆಚ್ಚು ಆಸಕ್ತಿ ಇತ್ತು. ಕಥೆ ಹೇಳುವ ಕಲೆ, ಸಿನಿಮಾ ನಿರ್ಮಾಣ ಮತ್ತು ನಿರ್ದೇಶನದ ಪ್ರಕ್ರಿಯೆ ತಮ್ಮನ್ನು ಹೆಚ್ಚು ಆಕರ್ಷಿಸಿದ್ದರಿಂದ ನಟನೆಯ ಬದಲು ನಿರ್ದೇಶನ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಚಿತ್ರರಂಗಕ್ಕೆ ಬರಬೇಕೆಂಬ ನಿರ್ಧಾರವನ್ನು ಮೊದಲು ತಮ್ಮ ಆಪ್ತರೊಂದಿಗೆ ಹಂಚಿಕೊಂಡಿದ್ದ ಜೇಸನ್, ಬಳಿಕ ತಂದೆ ವಿಜಯ್ ಅವರೊಂದಿಗೆ ಚರ್ಚಿಸಿದ್ದಾಗಿ ಹೇಳಿದ್ದಾರೆ. ತಮ್ಮ ಆಯ್ಕೆಗೆ ವಿಜಯ್ ಸಂಪೂರ್ಣ ಬೆಂಬಲ ನೀಡಿದ್ದು, ತಮ್ಮ ಆಸಕ್ತಿಯ ಕ್ಷೇತ್ರದಲ್ಲೇ ಮುಂದುವರಿಯುವಂತೆ ಪ್ರೋತ್ಸಾಹಿಸಿದ್ದಾಗಿ ಜೇಸನ್ ಸಂದರ್ಶನದಲ್ಲಿ ತಿಳಿಸಿದ್ದಾರೆ.










