ಭಾರತವು ತಾಂತ್ರಿಕವಾಗಿ ಮತ್ತು ಆರ್ಥಿಕವಾಗಿ ಬಲಿಷ್ಠವಾಗಲು ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಕೊಡುಗೆ ಅಪಾರವಾಗಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ ಹೇಳಿದ್ದಾರೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಜನ್ಮದಿನದ ಅಂಗವಾಗಿ ಕೆಪಿಸಿಸಿ ವತಿಯಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಆಯೋಜಿಸಿದ್ದ ‘ಸದ್ಭಾವನಾ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
21ನೇ ಶತಮಾನಕ್ಕೆ ಭಾರತ ಕಾಲಿಡುವ ಸಂದರ್ಭದಲ್ಲಿ ದೇಶದ ಜನತೆ ಶಾಂತಿ, ಸಮಾಧಾನ ಹಾಗೂ ಸಂತೋಷದಿಂದ ಬದುಕಬೇಕು ಎಂಬ ಕನಸನ್ನು ರಾಜೀವ್ ಗಾಂಧಿ ಕಂಡಿದ್ದರು ಎಂದು ಪರಮೇಶ್ವರ ಹೇಳಿದರು. ದೇಶ ಇಂದು ಆಧುನಿಕ ತಂತ್ರಜ್ಞಾನದಲ್ಲಿ ಸಾಕಷ್ಟು ಅಭಿವೃದ್ಧಿ ಹೊಂದಿದ್ದು, ಹಳ್ಳಿಯಿಂದ ದೆಹಲಿವರೆಗೆ ಇಂಟರ್ನೆಟ್ ಸಂಪರ್ಕದ ಮೂಲಕ ಸುಲಭವಾಗಿ ಮಾಹಿತಿ ಹಾಗೂ ಸೇವೆಗಳನ್ನು ತಲುಪಿಸಲು ಸಾಧ್ಯವಾಗಿದೆ. ಈ ತಾಂತ್ರಿಕ ಬೆಳವಣಿಗೆಗೆ ರಾಜೀವ್ ಗಾಂಧಿಯವರ ದೂರದೃಷ್ಟಿಯೇ ಪ್ರಮುಖ ಕಾರಣ ಎಂದು ಅವರು ಅಭಿಪ್ರಾಯಪಟ್ಟರು.
ತಳ ಸಮುದಾಯಗಳಿಗೆ ಅವಕಾಶ ಕಲ್ಪಿಸುವುದು, ಮಹಿಳೆಯರ ಸಬಲೀಕರಣ ಹಾಗೂ ದೇಶದ ಅಭಿವೃದ್ಧಿಗೆ ಅಗತ್ಯವಾದ ಹಲವು ಸುಧಾರಣೆಗಳಿಗೆ ರಾಜೀವ್ ಗಾಂಧಿ ಒತ್ತು ನೀಡಿದ್ದರು ಎಂದು ಪರಮೇಶ್ವರ ಹೇಳಿದರು. ಅವರ ಆಧುನಿಕ ಭಾರತದ ಕನಸು ಮತ್ತು ಸದ್ಭಾವನೆಯ ಸಂದೇಶವನ್ನು ಮುಂದಿನ ಪೀಳಿಗೆಗೂ ಕೊಂಡೊಯ್ಯುವ ಅಗತ್ಯವಿದೆ ಎಂದು ಅವರು ತಿಳಿಸಿದರು.










