ಬಿಡದಿಯಲ್ಲಿ ಟೌನ್ಶಿಪ್ ನಿರ್ಮಾಣ ಯೋಜನೆ ವಿರೋಧಿಸಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಇದೀಗ ಯುವಜನರ ಬೆಂಬಲ ಕೋರಲಾಗುತ್ತಿದೆ. 500 ದಿನಗಳನ್ನು ದಾಟಿರುವ ಈ ಆಂದೋಲನಕ್ಕೆ ವಿದ್ಯಾರ್ಥಿಗಳು, ತಂತ್ರಜ್ಞಾನ ವೃತ್ತಿಪರರು ಹಾಗೂ ಜೆನ್ಜೀ ಯುವಕರು ಕೈಜೋಡಿಸಬೇಕೆಂದು ರೈತರು ಹೊಸ ಅಭಿಯಾನ ಆರಂಭಿಸಿದ್ದಾರೆ. ಈ ಅಭಿಯಾನ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ರೈತರ ಪ್ರಕಾರ, ಬಿಡದಿ ಟೌನ್ಶಿಪ್ ಯೋಜನೆ ಜಾರಿಯಾದರೆ ಕೃಷಿ ಭೂಮಿಗೆ ಹಾನಿಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಯೋಜನೆಯನ್ನು ಕೈಬಿಡಬೇಕೆಂದು ಅವರು ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ. ಇತ್ತೀಚಿನ ಯುವಜನರ ನೇತೃತ್ವದ ಆಂದೋಲನಗಳ ಬಳಿಕ, ತಮ್ಮ ಹೋರಾಟಕ್ಕೂ ಯುವಕರ ಬೆಂಬಲ ಅಗತ್ಯವಿದೆ ಎಂದು ರೈತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ನಿಟ್ಟಿನಲ್ಲಿ “ಜೆನ್ ಜೀ ರೈತ ಮಕ್ಕಳೇ, ನಿಮ್ಮ ಸಮಯ ಈಗ ಬಂದಿದೆ” ಎಂಬ ಸಂದೇಶದ ಕರಪತ್ರಗಳನ್ನು ವಿತರಿಸಲಾಗುತ್ತಿದೆ. ಹೆಚ್ಚಿನ ಯುವಕರು ಈ ಹೋರಾಟಕ್ಕೆ ಬೆಂಬಲ ಸೂಚಿಸಿ, ವಿಷಯದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ರೈತರು ಮನವಿ ಮಾಡಿದ್ದಾರೆ.










