ಇರಾನ್ನ ದಿವಂಗತ ಸರ್ವೋಚ್ಚ ನಾಯಕ (ಸುಪ್ರೀಂ ಲೀಡರ್) ಅಯತೊಲ್ಲಾ ಅಲಿ ಖಮೇನಿ ಅವರ ಸರ್ಕಾರಿ ಅಂತ್ಯಕ್ರಿಯೆ ಮತ್ತು ಅಂತಿಮ ನಮನ ಸಲ್ಲಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಕೋರಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅಧಿಕೃತ ಆಹ್ವಾನ ನೀಡಿದ್ದಾರೆ. ಈ ಮಹತ್ವದ ಬೆಳವಣಿಗೆಯ ಕುರಿತು ರಾಜತಾಂತ್ರಿಕ ಮೂಲಗಳು ಮಾಹಿತಿ ನೀಡಿದ್ದು, ಪಶ್ಚಿಮ ಏಷ್ಯಾದಲ್ಲಿನ ಸೂಕ್ಷ್ಮ ಭೌಗೋಳಿಕ-ರಾಜಕೀಯ ಪರಿಸ್ಥಿತಿಯ ನಡುವೆ ಭಾರತ-ಇರಾನ್ ಬಾಂಧವ್ಯದ ದೃಷ್ಟಿಯಿಂದ ಈ ಆಹ್ವಾನ ತೀವ್ರ ಕುತೂಹಲ ಮೂಡಿಸಿದೆ.
ಮೂರು ದಶಕಗಳಿಗೂ ಹೆಚ್ಚು ಕಾಲ ಇರಾನ್ ಮುನ್ನಡೆಸಿದ್ದ 86 ವರ್ಷದ ಅಲಿ ಖಮೇನಿ ಅವರು, ಕಳೆದ ಫೆಬ್ರವರಿ 28ರಂದು ಟೆಹ್ರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ್ದ ಜಂಟಿ ವೈಮಾನಿಕ ದಾಳಿಯಲ್ಲಿ ಹತರಾಗಿದ್ದರು. ಆನಂತರದ ಸಂಘರ್ಷ ಮತ್ತು ಯುದ್ಧದ ಭೀಕರತೆಯಿಂದಾಗಿ ಮುಂದೂಡಲ್ಪಟ್ಟಿದ್ದ ಅವರ ಅಂತ್ಯಕ್ರಿಯೆಯು ಇದೀಗ ಜುಲೈ 5 ರಿಂದ 9ರವರೆಗೆ ನಡೆಯಲಿದೆ. ಟೆಹ್ರಾನ್, ಕೋಮ್ ಸೇರಿದಂತೆ ಇರಾನ್ನ ವಿವಿಧ ನಗರಗಳಲ್ಲಿ ಸತತವಾಗಿ ಬೃಹತ್ ಮೆರವಣಿಗೆಗಳು ನಡೆಯಲಿದ್ದು, ಜುಲೈ 9 ರಂದು ಖಮೇನಿ ಅವರ ಹುಟ್ಟೂರಾದ ಮಶಾದ್ ನಗರದಲ್ಲಿ ಅಂತಿಮ ವಿಧಿವಿಧಾನಗಳು ನೆರವೇರಲಿವೆ. ಈ ಐತಿಹಾಸಿಕ ಅಂತ್ಯಕ್ರಿಯೆಯಲ್ಲಿ ಸರಿಸುಮಾರು 1 ರಿಂದ 2 ಕೋಟಿಗೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆಯಿದೆ.
ಇರಾನ್ ಅಧ್ಯಕ್ಷರ ಆಹ್ವಾನದ ಕುರಿತು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅಥವಾ ಭಾರತ ಸರ್ಕಾರದಿಂದ ಈವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ಹೊರಬಿದ್ದಿಲ್ಲ. ಪ್ರಧಾನಿ ಮೋದಿ ಅವರು ಖುದ್ದಾಗಿ ಭಾಗವಹಿಸುತ್ತಾರೆಯೇ ಅಥವಾ ಭಾರತದ ಪ್ರತಿನಿಧಿಯಾಗಿ ಬೇರೆ ಯಾವುದೇ ಹಿರಿಯ ನಾಯಕರನ್ನು ಕಳುಹಿಸಿಕೊಡಲಾಗುತ್ತದೆಯೇ ಎಂಬುದು ಇನ್ನಷ್ಟೇ ನಿರ್ಧಾರವಾಗಬೇಕಿದೆ. ಇರಾನ್ ಮತ್ತು ಅಮೆರಿಕ ನಡುವೆ ಶಾಂತಿ ಒಪ್ಪಂದದ ಬೆಳವಣಿಗೆಗಳು ನಡೆಯುತ್ತಿರುವ ಈ ಹೊತ್ತಿನಲ್ಲಿ, ಭದ್ರತೆ ಹಾಗೂ ಜಾಗತಿಕ ರಾಜತಾಂತ್ರಿಕ ಸಮತೋಲನವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ನವದೆಹಲಿಯ ಮುಂದಿನ ನಡೆ ತೀವ್ರ ಮಹತ್ವ ಪಡೆದುಕೊಂಡಿದೆ.










