ಬೆಂಗಳೂರು ‘ಊರ ಹಬ್ಬ’ಕ್ಕೆ ನಾರ್ಥಿ ವ್ಯಂಗ್ಯ: “ಮಾಡೋಕೆ ಕೆಲಸ ಇಲ್ವಾ” ಎಂದಿದ್ದಕ್ಕೆ ಕನ್ನಡಿಗರ ಖಡಕ್ ತಿರುಗೇಟು

ಸಿಲಿಕಾನ್ ಸಿಟಿ ಬೆಂಗಳೂರಿನ ಬಹುದೊಡ್ಡ ಸಾಂಸ್ಕೃತಿಕ ಆಚರಣೆಯಾದ ‘ಊರ ಹಬ್ಬ’ದ (ಕರಗ ಅಥವಾ ಗ್ರಾಮ ದೇವತೆ ಉತ್ಸವ) ಬಗ್ಗೆ ಉತ್ತರ ಭಾರತ ಮೂಲದ ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ವ್ಯಂಗ್ಯದ ಪೋಸ್ಟ್ ಇದೀಗ ಕನ್ನಡಿಗರ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ. ರಸ್ತೆಗಳಲ್ಲಿ ನಡೆಯುತ್ತಿದ್ದ ಅದ್ದೂರಿ ಮೆರವಣಿಗೆ ಹಾಗೂ ಜನಸಂದಣಿಯ ವಿಡಿಯೋವನ್ನು ಹಂಚಿಕೊಂಡಿದ್ದ ಆತ, “ಈ ಊರಿನ ಜನರಿಗೆ ಮಾಡೋಕೆ ಬೇರೆ ಕೆಲಸ ಇಲ್ವಾ?” ಎಂದು ಪ್ರಶ್ನಿಸಿ ಅಪಹಾಸ್ಯ ಮಾಡಿದ್ದೇ ಈ ವಿವಾದಕ್ಕೆ ಪ್ರಮುಖ ಕಾರಣವಾಗಿದೆ.

ಈ ಅಹಂಕಾರದ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಹಾಗೂ ಕನ್ನಡಿಗರು ಆತನಿಗೆ ಖಡಕ್ ಭಾಷೆಯಲ್ಲಿಯೇ ತಕ್ಕ ತಿರುಗೇಟು ನೀಡಿದ್ದಾರೆ. “ನೀವು ಅನ್ನ ಅರಸಿ ಬಂದಿರುವ ಈ ಊರು ಕೇವಲ ಐಟಿ-ಬಿಟಿ ಕಂಪನಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಇದಕ್ಕೂ ನೂರಾರು ವರ್ಷಗಳ ಭವ್ಯ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆ ಇದೆ. ನಮ್ಮ ನೆಲದ ಆಚರಣೆಗಳನ್ನು ಗೌರವಿಸುವುದನ್ನು ಕಲಿಯಿರಿ, ನಮ್ಮ ಭಾವನೆಗಳ ಬಗ್ಗೆ ಹಗುರವಾಗಿ ಮಾತನಾಡುವ ಹಕ್ಕು ನಿಮಗಿಲ್ಲ” ಎಂದು ಕನ್ನಡಿಗರು ಆತನ ಬೆವರೋಳಿಸಿದ್ದಾರೆ.

ಬೆಂಗಳೂರಿಗೆ ಬಂದು ಇಲ್ಲಿನ ಸೌಲಭ್ಯಗಳನ್ನು ಬಳಸಿಕೊಂಡು, ಇಲ್ಲಿನ ಜನ, ಭಾಷೆ ಹಾಗೂ ಸಂಪ್ರದಾಯಗಳನ್ನೇ ಕೀಳಾಗಿ ಕಾಣುವ ಇಂತಹ ಪ್ರವೃತ್ತಿ ಇತ್ತೀಚೆಗೆ ಹೆಚ್ಚಾಗುತ್ತಿರುವುದರ ಬಗ್ಗೆ ಸಾರ್ವಜನಿಕರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. “ನಮ್ಮ ನೆಲದ ಸಂಸ್ಕೃತಿಯನ್ನು ಸಹಿಸಿಕೊಳ್ಳಲು ಆಗದಿದ್ದರೆ ನಿಮ್ಮ ಊರಿಗೆ ವಾಪಸ್ ಹೋಗಿ. ಬೆಂಗಳೂರಿನ ಅಸ್ಮಿತೆಯನ್ನು ಕೆಣಕುವ ಸಾಹಸಕ್ಕೆ ಕೈಹಾಕಬೇಡಿ” ಎಂದು ಕನ್ನಡಿಗರು ಎಚ್ಚರಿಕೆ ನೀಡುವ ಮೂಲಕ, ತಮ್ಮ ಪರಂಪರೆಯ ಮೇಲಿನ ಅಭಿಮಾನವನ್ನು ಮತ್ತೊಮ್ಮೆ ಎತ್ತಿ ಹಿಡಿದಿದ್ದಾರೆ.

   SHARE  

Facebook
Twitter
Telegram
WhatsApp

   TOP NEWS  

   RECENT NEWS