ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಹೊಸ ಅಲೆ ಸೃಷ್ಟಿಸಿದ್ದ ‘ಎ’ ಚಿತ್ರದ ಸೂಪರ್ ಹಿಟ್ ಗೀತೆ “ಓ ಗುಲಾಬಿ” ಇಂದಿಗೂ ಪ್ರೇಕ್ಷಕರ ನೆಚ್ಚಿನ ಹಾಡಾಗಿದೆ. ಈ ಹಾಡಿನ ಹುಟ್ಟು ಮತ್ತು ಅದರ ಮೇಕಿಂಗ್ ಹಿಂದಿರುವ ಅಸಲಿ ಕಥೆಯನ್ನು ನಟ ಹಾಗೂ ನಿರ್ದೇಶಕ ಉಪೇಂದ್ರ ಇತ್ತೀಚೆಗೆ ಹಂಚಿಕೊಂಡಿದ್ದಾರೆ. ಸಂಗೀತ ನಿರ್ದೇಶಕ ಗುರುಕಿರಣ್ ಅವರು ಈ ಹಾಡಿನ ಟ್ಯೂನ್ ಅನ್ನು ಒಬ್ರು ಸಿದ್ಧಪಡಿಸಿ ಉಪ್ಪಿ ಎದುರು ಪ್ಲೇ ಮಾಡಿದಾಗ, ಉಪೇಂದ್ರ ಅವರಿಗೆ ಕಥೆಯ ಸಂದರ್ಭಕ್ಕೆ ಇದು ಪಕ್ಕಾ ಹೊಂದುತ್ತದೆ ಎಂದು ಮೊದಲ ಕೇಳಿಕೆಗೆ ಕಥೆ ಓಕೆ ಆಗಿತ್ತು. ಆದರೆ, ಕಥೆ ಮತ್ತು ಟ್ಯೂನ್ ಫೈನಲ್ ಆದ ಮೇಲೂ ಉಪೇಂದ್ರ ಅವರು ಸಾಹಿತ್ಯ ಮತ್ತು ಮ್ಯೂಸಿಕ್ ಕಂಪೋಸಿಷನ್ ಪೂರ್ಣಗೊಳಿಸಲು ಬರೋಬ್ಬರಿ 30 ದಿನಗಳ ಕಾಲ ಸಮಯ ಕೇಳಿದ್ದರು.
ಯಾವುದೇ ಒಂದು ಸಾಮಾನ್ಯ ಹಾಡಿಗೆ ಕೆಲವೇ ದಿನಗಳಲ್ಲಿ ಸಾಹಿತ್ಯ ಬರೆದು ಮುಗಿಸಬಹುದು, ಆದರೆ ಉಪೇಂದ್ರ ಅವರಿಗೆ ಆ ಹಾಡು ಕೇವಲ ಒಂದು ಪ್ರೇಮಗೀತೆಯಾಗಿರದೆ ಸಿನಿಮಾದ ಇಡೀ ಫಿಲಾಸಫಿಯನ್ನು ಹೇಳುವಂತಿರಬೇಕಿತ್ತು. “ಓ ಗುಲಾಬಿ, ನಗಬೇಡ ಪ್ರೀತಿ ಒಂಥರಾ…” ಎಂಬ ಸಾಲುಗಳ ಹಿಂದೆ ಪ್ರೀತಿಯ ತಳಮಳ, ಮೋಸ, ಮತ್ತು ಸಮಾಜದ ಮುಖವಾಡವನ್ನು ಬಿಚ್ಚಿಡುವ ಗಂಭೀರವಾದ ಚಿಂತನೆ ಇತ್ತು. ಈ ಸಾಲುಗಳಿಗೆ ತಕ್ಕಂತೆ ಸಂಗೀತದ ಪ್ರತಿಯೊಂದು ಬಿಟ್ ಕೂಡ ಪ್ರೇಕ್ಷಕರ ಹೃದಯಕ್ಕೆ ನಾಟುವಂತೆ ಮಾಡಲು ಮತ್ತು ಪ್ರತಿಯೊಂದು ಪದದ ಹಿಂದಿನ ತತ್ವಜ್ಞಾನವನ್ನು ಪಕ್ಕಾ ಮಾಡಲು ಅವರು ಅಷ್ಟು ದಿನಗಳ ಕಾಲ ಸುದೀರ್ಘ ಚರ್ಚೆ ನಡೆಸಿದ್ದರು.
ಉಪೇಂದ್ರ ಅವರು ಅಂದು ಹಠ ಹಿಡಿದು 30 ದಿನಗಳ ಕಾಲ ಸಮಯ ತೆಗೆದುಕೊಂಡು ಮಾಡಿದ ಆ ಕಠಿಣ ಪರಿಶ್ರಮಕ್ಕೆ ಇಂದು ಅದ್ಭುತ ಪ್ರತಿಫಲ ಸಿಕ್ಕಿದೆ. ಬಿಡುಗಡೆಯಾಗಿ ದಶಕಗಳೇ ಕಳೆದರೂ ‘ಓ ಗುಲಾಬಿ’ ಹಾಡಿನ ಕ್ರೇಜ್ ಮತ್ತು ಅದರ ಮ್ಯೂಸಿಕ್ ಕಿಂಚಿತ್ತೂ ಕಮ್ಮಿಯಾಗಿಲ್ಲ. ಕಥೆ ಓಕೆ ಆದ ತಕ್ಷಣ ಧಾವಂತದಲ್ಲಿ ಹಾಡು ಮುಗಿಸದೆ, ಪ್ರತಿಯೊಂದು ಕಲ್ಪನೆಗೂ ಜೀವ ತುಂಬಲು ಉಪ್ಪಿ ತಗೆದುಕೊಂಡ ಆ 30 ದಿನಗಳ ನಿರ್ಧಾರವೇ ಇಂದು ಆ ಹಾಡನ್ನು ಸಾರ್ವಕಾಲಿಕ ಕ್ಲಾಸಿಕ್ ಲಿಸ್ಟ್ಗೆ ಸೇರಿಸುವಂತೆ ಮಾಡಿದೆ ಎಂದು ಚಿತ್ರರಂಗದ ಗಣ್ಯರು ಮತ್ತು ಅಭಿಮಾನಿಗಳು ಉಪ್ಪಿ ಜಾಣ್ಮೆಯನ್ನು ಕೊಂಡಾಡುತ್ತಿದ್ದಾರೆ.









