ಎಸ್ಎಸ್ಎಲ್ಸಿ ಪರೀಕ್ಷೆಯ ತೃತೀಯ ಭಾಷೆಯ ಗ್ರೇಡಿಂಗ್ ವ್ಯವಸ್ಥೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ನಿರ್ಧಾರದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿ, ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಅಧ್ಯಕ್ಷ ಟಿ.ಎ. ನಾರಾಯಣಗೌಡರು ತೀವ್ರ ವಾಗ್ದಾಳಿ ನಡೆಸಿದ್ದಾರೆ. #GoBackGovernor ಎಂಬ ಹ್ಯಾಶ್ಟ್ಯಾಗ್ ಬಳಸುವ ಮೂಲಕ ಅಭಿಯಾನಕ್ಕೆ ಕರೆ ನೀಡಿದ್ದಾರೆ.
ತಮ್ಮ ಪೋಸ್ಟ್ನ ಆರಂಭದಲ್ಲಿ ಕರ್ನಾಟಕದ ಮೊದಲ ರಾಜ್ಯಪಾಲರಾದ ಜಯಚಾಮರಾಜೇಂದ್ರ ಒಡೆಯರ್ ಅವರ ಸಂಸ್ಕೃತಿ ಮತ್ತು ಸಾಹಿತ್ಯ ಪ್ರೇಮವನ್ನು ಸ್ಮರಿಸಿರುವ ನಾರಾಯಣಗೌಡರು, ಟಿ.ಎನ್. ಚತುರ್ವೇದಿ, ಖುರ್ಷಿದ್ ಆಲಂ ಖಾನ್ ಮತ್ತು ವಿ.ಎಸ್.ರಮಾದೇವಿ ಅವರಂತಹ ರಾಜ್ಯಪಾಲರು ಕನ್ನಡಿಗರ ಅಸ್ಮಿತೆಯನ್ನು ಗೌರವಿಸಿ ಪ್ರೀತಿ ಗೆದ್ದಿದ್ದರು ಎಂದು ನೆನಪಿಸಿಕೊಂಡಿದ್ದಾರೆ.
TA Narayana Gowda
ರಾಜ್ಯಪಾಲರ ಹಸ್ತಕ್ಷೇಪಕ್ಕೆ ಆಕ್ಷೇಪ
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆಗೆ ಗ್ರೇಡಿಂಗ್ ವ್ಯವಸ್ಥೆ ತರುವ ಮೂಲಕ ಮಕ್ಕಳ ಮೇಲಿನ ಹೊರೆ ಕಡಿಮೆ ಮಾಡಲು ಸರ್ಕಾರ ಮುಂದಾಗಿದೆ. ಈ ನೀತಿಯನ್ನು ಪುನರ್ ಪರಿಶೀಲಿಸುವಂತೆ ರಾಜ್ಯಪಾಲರು ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವುದು ಸರಿಯಲ್ಲ. ರಾಜ್ಯಪಾಲರು ಇದೇ ಕಾಳಜಿಯನ್ನು ತಮ್ಮ ತವರು ರಾಜ್ಯವಾದ ಮಧ್ಯಪ್ರದೇಶದ ಮಕ್ಕಳ ಮೇಲೆ ಏಕೆ ತೋರುವುದಿಲ್ಲ? ಅಲ್ಲಿಯೂ ಮೂರನೇ ಭಾಷೆಯನ್ನು ಕಡ್ಡಾಯ ಮಾಡಲಿ ಮತ್ತು ಅಲ್ಲಿ ಕನ್ನಡವನ್ನು ಕಡ್ಡಾಯವಾಗಿ ಕಲಿಸಲಿ ನೋಡೋಣ ಎಂದು ಸವಾಲು ಹಾಕಿದ್ದಾರೆ.
ಕೇಂದ್ರದ ಏಜೆಂಟರಂತೆ ವರ್ತನೆ
ರಾಜ್ಯಪಾಲರು ಸಾಂವಿಧಾನಿಕವಾಗಿ ಪಕ್ಷಾತೀತರಾಗಿರಬೇಕು. ಆದರೆ, ಇತ್ತೀಚಿನ ರಾಜ್ಯಪಾಲರು ಕೇಂದ್ರ ಸರ್ಕಾರದ ಅಥವಾ ರಾಷ್ಟ್ರೀಯ ಪಕ್ಷಗಳ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಅವರು ಟೀಕಿಸಿದ್ದಾರೆ. ಹಿಂದೆ ನಾವು ಬ್ರಿಟಿಷ್ ಸಾಮ್ರಾಜ್ಯಶಾಹಿಯ ಅಡಿಯಾಳಾಗಿದ್ದೆವು, ಈಗ ನಮ್ಮನ್ನು ಹಿಂದಿ ಸಾಮ್ರಾಜ್ಯಶಾಹಿಯ ಗುಲಾಮರನ್ನಾಗಿಸಲು ಸಂಚು ನಡೆಯುತ್ತಿದೆ. ಆದರೆ ಕರ್ನಾಟಕ ಈಗ ಎಚ್ಚೆತ್ತುಕೊಂಡಿದೆ. ಇಂತಹ ಷಡ್ಯಂತ್ರಗಳಿಗೆ ನಾವು ಬಲಿಯಾಗುವುದಿಲ್ಲ ಎಂದು ನಾರಾಯಣಗೌಡರು ಎಚ್ಚರಿಸಿದ್ದಾರೆ.
ರಾಜೀನಾಮೆಗೆ ಆಗ್ರಹ
ಕನ್ನಡ ವಿರೋಧಿ ಧೋರಣೆ ತಳೆದಿರುವ ತಾವರ್ ಚಂದ್ ಗೆಹ್ಲೋಟ್ ಅವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ನಿರ್ಗಮಿಸಬೇಕು ಅಥವಾ ಕೇಂದ್ರ ಸರ್ಕಾರ ಅವರನ್ನು ವಾಪಸ್ ಕರೆಸಿಕೊಳ್ಳಬೇಕು. ಕರ್ನಾಟಕದಲ್ಲಿ ಕನ್ನಡದ್ರೋಹಿಗಳಿಗೆ ಜಾಗವಿಲ್ಲ ಎಂದು ಅವರು ಗುಡುಗಿದ್ದಾರೆ. ಈ ಪೋಸ್ಟ್ ಈಗ ಕನ್ನಡಿಗರ ವಲಯದಲ್ಲಿ ದೊಡ್ಡ ಮಟ್ಟದ ಸಂಚಲನ ಸೃಷ್ಟಿಸಿದ್ದು, ರಾಜ್ಯಪಾಲರು ಮತ್ತು ರಾಜ್ಯ ಸರ್ಕಾರದ ನಡುವಿನ ಶೀತಲ ಸಮರಕ್ಕೆ ಹೊಸ ಆಯಾಮ ನೀಡಿದೆ.
ನಾವು ಮೊದಲು ಕನ್ನಡಿಗರು, ಕನ್ನಡವೇ ನಮ್ಮ ಹೆಸರು, ಉಸಿರು, ಬದುಕು. ಕನ್ನಡಿಗರ ಮೇಲೆ ಹಿಂದಿ ಹೇರಿದರೆ ನಾವು ಸಿಡಿದೇಳುತ್ತೇವೆ. ತಾಕತ್ತಿದ್ದರೆ ಉತ್ತರದ ರಾಜ್ಯಗಳಲ್ಲಿ ಮೂರನೇ ಭಾಷೆಯಾಗಿ ಕನ್ನಡ ಕಡ್ಡಾಯ ಮಾಡಿ. ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಯಾಕೆ? ನೆರೆಯ ಮಹಾರಾಷ್ಟ್ರ ತಮಿಳುನಾಡಿನಲ್ಲಿ ದ್ವಿಭಾಷಾ ನೀತಿ, ಉತ್ತರದ ರಾಜ್ಯಗಳಲ್ಲೂ ದ್ವಿಭಾಷಾ ನೀತಿ? ಕರ್ನಾಟಕದಲ್ಲಿ ಯಾಕೆ ತ್ರಿಭಾಷಾ ನೀತಿ? ಕನ್ನಡದ ಮಕ್ಕಳಿಗೆ ಮೂರನೇ ಭಾಷೆಯ ಹೊರೆ ನಿಲ್ಲಿಸಿ. ವೃತ್ತಿ ಜೀವನಕ್ಕೆ ಪೂರಕವಾದ ಜ್ಞಾನವನ್ನು ಹೇಳಿಕೊಡಿ. ಹಿಂದಿ ನಮಗೆ ಬೇಕಿಲ್ಲ. ಹಿಂದಿ ಮಾಫಿಯಾ ಪರವಾಗಿ ನಿಂತಿರುವ ಕುತಂತ್ರಿಗಳಿಗೆ ಧಿಕ್ಕಾರ. ನಿಮ್ಮ ಸಂಚನ್ನು ನಾವು ವಿಫಲಗೊಳಿಸುತ್ತೇವೆ. ರಾಜ್ಯಪಾಲರೇ, ಅಧಿಕಪ್ರಸಂಗ ಮಾಡಬೇಡಿ. ಕನ್ನಡಿಗರ ಭವಿಷ್ಯದ ವಿಷಯದಲ್ಲಿ ಮೂಗು ತೂರಿಸಬೇಡಿ.
ಹಿಂದಿ ಹೇರಲು ನಾವು ಬಿಡುವುದಿಲ್ಲ
ಕನ್ನಡ ನಾಡಿನ ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡುವ ದುಷ್ಟರೇ ಕೇಳಿ. ಹಿಂದಿ ಹೇರಲು ನಾವು ಬಿಡುವುದಿಲ್ಲ. ನಾಡದ್ರೋಹಿಗಳೇ ನೆನಪಿಟ್ಟುಕೊಳ್ಳಿ, ಕರ್ನಾಟಕದಲ್ಲಿ ಹಿಂದಿಹೇರಿಕೆಯ ಕೊನೆಯ ಬೇರನ್ನು ಕಿತ್ತು ಎಸೆಯುವವರೆಗೆ ನಾವು ಹೋರಾಡುತ್ತೇವೆ. ಕರ್ನಾಟಕದಲ್ಲಿ ಇನ್ನು ಮುಂದೆ ಹಿಂದಿಹೇರಿಕೆಗೆ ಯಾವುದೇ ಅವಕಾಶ ನೀಡುವುದಿಲ್ಲ. ನಾಡದ್ರೋಹಿಗಳನ್ನು ಕರವೇ ಬಗ್ಗುಬಡಿಯುತ್ತದೆ. ರಾಜ್ಯಪಾಲರೇ, ಧೈರ್ಯವಿದ್ದರೆ ನಿಮ್ಮ ತವರು ರಾಜ್ಯ ಮಧ್ಯಪ್ರದೇಶದಲ್ಲಿ ಕನ್ನಡವನ್ನು ಮೂರನೇ ಭಾಷೆಯನ್ನಾಗಿ ಕಡ್ಡಾಯ ಮಾಡಿ, ಆಮೇಲೆ ನಮಗೆ ಉಪದೇಶ ಮಾಡಿ.
ಕನ್ನಡಿಗರು ಹಿಂದಿಹೇರಿಕೆ ಸಹಿಸುವುದಿಲ್ಲ. ಜೇನುಗೂಡಿಗೆ ಕೈಹಾಕಬೇಡಿ, ಕನ್ನಡಿಗರು ಕೆರಳಿ ನಿಲ್ಲುತ್ತಾರೆ. ತೃತೀಯ ಭಾಷೆ ಗ್ರೇಡಿಂಗ್ ವಿರುದ್ಧ ಮಾತನಾಡುತ್ತಿರುವ ದೇಶದ್ರೋಹಿಗಳಿಗೆ ಧಿಕ್ಕಾರ. ಕನ್ನಡಿಗರನ್ನು ಮತ್ತೆ ಮತ್ತೆ ಕೆಣಕಬೇಡಿ. ರಾಷ್ಟ್ರಕವಿ ಕುವೆಂಪು ಅವರ ಕನಸು ನನಸಾಗಿದೆ. ಕನ್ನಡಿಗರ ಈ ಸಂಭ್ರಮಕ್ಕೆ ಕೊಳ್ಳಿ ಇಡಲು ನಾವು ಯಾರಿಗೂ ಬಿಡುವುದಿಲ್ಲ. ಹಿಂದಿಹೇರಿಕೆ ನಿಲ್ಲಿಸಲು ನಾವು ಪ್ರಾಣಾರ್ಪಣೆಗೂ ಸಿದ್ಧ. ನಾಡದ್ರೋಹಿಗಳೇ, ಕರ್ನಾಟಕದ ನೆಮ್ಮದಿ ಹಾಳುಮಾಡಬೇಡಿ. ಭಾರತವೆಂಬುದು ಭಾಷಾ ರಾಜ್ಯಗಳ ಒಕ್ಕೂಟ. ಕರ್ನಾಟಕದ ಮೇಲೆ ಹಿಂದಿ ಹೇರಿದರೆ ರಕ್ತಕ್ರಾಂತಿ ನಿಶ್ಚಿತ. ನಮ್ಮದು ಹಿಂದಿಭಾರತವಲ್ಲ, ಬಹುತ್ವ ಭಾರತ. ಕನ್ನಡಿಗರಿಗೆ ಕನ್ನಡವೇ ರಾಷ್ಟ್ರಭಾಷೆ. ಕನ್ನಡಿಗರ ತಂಟೆಗೆ ಬರಬೇಡಿ. ಹಿಂದಿಹೇರಿಕೆ ಪರವಾಗಿರುವವರೇ ದೇಶದ್ರೋಹಿಗಳು. ಅವರು ದೇಶವನ್ನು ಒಡೆಯಲು ಯತ್ನಿಸುತ್ತಿದ್ದಾರೆ.










