ಹತ್ತಿರದವರೇ ನನ್ನನ್ನ ಚಾರಿಟಿ ಕೇಸ್‌ ಆಗಿ ನೋಡಲು ಆರಂಭಿಸಿದರು’: ಮನದಾಳದ ನೋವು ಬಿಚ್ಚಿಟ್ಟ ಮೇಘನಾ ರಾಜ್

ದಿವಂಗತ ನಟ ಚಿರಂಜೀವಿ ಸರ್ಜಾ ಅವರ ಅಗಲಿಕೆಯ ನಂತರ ತಮ್ಮ ಬದುಕಿನಲ್ಲಿ ಎದುರಾದ ಕಠಿಣ ಸವಾಲುಗಳು ಹಾಗೂ ಜನರ ಬದಲಾದ ವರ್ತನೆಯ ಕುರಿತು ನಟಿ ಮೇಘನಾ ರಾಜ್ ಅವರು ಇತ್ತೀಚೆಗೆ ಮನಬಿಚ್ಚಿ ಮಾತನಾಡಿದ್ದಾರೆ. ರಾಧಿಕಾ ಶರತ್‌ಕುಮಾರ್ ಅವರ ಪುತ್ರಿ ರಾಯನೆ ನಡೆಸಿಕೊಡುವ ಯೂಟ್ಯೂಬ್‌ ಸಂದರ್ಶನವೊಂದರಲ್ಲಿ (The Rayane Show) ಭಾಗಿಯಾಗಿದ್ದ ಅವರು, ಪತಿಯ ನಿಧನದ ನಂತರ ಸಮಾಜ ಹಾಗೂ ತಮ್ಮದೇ ಆಪ್ತ ವಲಯದವರು ತಮ್ಮನ್ನು ನಡೆಸಿಕೊಂಡ ರೀತಿಯ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ತಮ್ಮ ನೋವಿನ ದಿನಗಳನ್ನು ನೆನಪಿಸಿಕೊಂಡ ಮೇಘನಾ, “ಚಿರಂಜೀವಿ ಅವರ ಹಠಾತ್ ಮರಣದ ನಂತರ ಇದ್ದಕ್ಕಿದ್ದಂತೆ ಕೆಲವರು, ಅದರಲ್ಲೂ ತೀರಾ ಹತ್ತಿರದವರೇ ನನ್ನನ್ನು ಒಬ್ಬ ಸಂತ್ರಸ್ತೆಯಂತೆ (ಚಾರಿಟಿ ಕೇಸ್) ನೋಡಲು ಆರಂಭಿಸಿದರು. ನಾನು ತೀವ್ರ ದುಃಖದಲ್ಲಿದ್ದಾಗ ಕೆಲವರು ನನ್ನೊಂದಿಗೆ ಮಾತನಾಡುವುದನ್ನೇ ಸಂಪೂರ್ಣವಾಗಿ ನಿಲ್ಲಿಸಿಬಿಟ್ಟರು,” ಎಂದು ಭಾವುಕರಾಗಿದ್ದಾರೆ. ಬಾಲ್ಯದಿಂದಲೂ ದೃಢವಾಗಿ, ಸ್ವಾಭಿಮಾನಿಯಾಗಿ ಬೆಳೆದ ತಮಗೆ, ಇತರರು ತಮ್ಮನ್ನು ಅಸಹಾಯಕಳಂತೆ ಅಥವಾ ‘ಚಾರಿಟಿ ಕೇಸ್’ ರೀತಿ ನೋಡಿದ್ದು ಸ್ವಲ್ಪವೂ ಇಷ್ಟವಾಗಲಿಲ್ಲ ಹಾಗೂ ಆ ರೀತಿಯ ಅನುಕಂಪ ತಮಗೆ ಬೇಕಿರಲಿಲ್ಲ ಎಂಬುದನ್ನು ಅವರು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ತಮ್ಮ ಮುದ್ದಿನ ಮಗ ರಾಯನ್ ರಾಜ್ ಸರ್ಜಾ ಬಗ್ಗೆಯೂ ಮಾತನಾಡಿದ ಅವರು, ತಂದೆ ಇಲ್ಲ ಎಂಬ ಕೊರಗು ಮಗನಿಗೆ ಕಾಡದಂತೆ ತಾವೇ ತಂದೆ-ತಾಯಿಯಾಗಿ ಅವನನ್ನು ಬೆಳೆಸುತ್ತಿರುವ ಬಗೆಯನ್ನು ವಿವರಿಸಿದರು. ತಮ್ಮ ಕುಟುಂಬದ ಬೆಂಬಲದೊಂದಿಗೆ ಮುನ್ನಡೆಯುತ್ತಿದ್ದರೂ, ಬೆಳೆಯುತ್ತಿರುವ ಮಗನಿಗೆ ಒಬ್ಬ ‘ಫಾದರ್ ಫಿಗರ್’ (ತಂದೆಯ ಸ್ಥಾನ ಹಾಗೂ ಮಾರ್ಗದರ್ಶನ) ಅವಶ್ಯಕತೆ ಇದೆ ಎನಿಸುತ್ತದೆ ಎಂಬ ಸೂಕ್ಷ್ಮ ವಿಚಾರವನ್ನೂ ಅವರು ಹಂಚಿಕೊಂಡಿದ್ದಾರೆ. ಕಷ್ಟದ ಸಮಯದಲ್ಲಿ ಕುಗ್ಗದೆ, ಟೀಕೆ ಹಾಗೂ ಅನುಕಂಪದ ನೋಟಗಳನ್ನು ಮೀರಿ ನಿಂತು ದೃಢವಾಗಿ ಹೆಜ್ಜೆ ಇಡುತ್ತಿರುವ ಮೇಘನಾ ಅವರ ಈ ಮಾತುಗಳು ಅಭಿಮಾನಿಗಳ ಹೃದಯ ತಟ್ಟಿವೆ.

   SHARE  

Facebook
Twitter
Telegram
WhatsApp

   TOP NEWS  

   RECENT NEWS