ಬರ ಪರಿಸ್ಥಿತಿ ಗಂಭೀರವಾಗ್ತಿದೆ, ಅಣೆಕಟ್ಟು ನೀರು ನಂಬಿಕೊಂಡು ಬೆಳೆ ಹಾಕಬೇಡಿ – ರೈತರಿಗೆ ಡಿಕೆಶಿ ಮನವಿ..

ಮಳೆ ಕೊರತೆಯಿಂದ ರಾಜ್ಯದಲ್ಲಿ ಬರ (Drought) ಪರಿಸ್ಥಿತಿ ಗಂಭೀರವಾಗ್ತಿದೆ ರಾಜ್ಯದ ಬಹುತೇಕ ಅಣೆಕಟ್ಟುಗಳಲ್ಲಿನ ಒಳಹರಿವು ಶೂನ್ಯಕ್ಕೆ ತಲುಪಿದೆ. ಹೀಗಾಗಿ ರೈತರು ಅಣೆಕಟ್ಟು ನೀರು ನಂಬಿಕೊಂಡು ಬೆಳೆ ಹಾಕಬಾರದು ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ಕರೆ ನೀಡಿದರು.

 

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ತುಂಗಭದ್ರಾ (Tungabhadra Dam), ಘಟ್ಟಪ್ರಭಾ, ಮಲಪ್ರಭಾ, ನಾರಾಯಣಪುರ, ವಾಣಿವಿಲಾಸ ಅಣೆಕಟ್ಟೆಗಳ ಒಳಹರಿವಿನ ಪ್ರಮಾಣ ಶೂನ್ಯವಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಚೌಟ್ರಿಗಳಲ್ಲಿ SIR ಫಾರಂ ತುಂಬಲು ಅವಕಾಶ ಇಲ್ಲ – ಹೆಚ್‌ಡಿಕೆ ವಿಡಿಯೋ ರಿಲೀಸ್‌ ಬೆನ್ನಲ್ಲೇ ಡಿಕೆಶಿ ವಾರ್ನಿಂಗ್‌

 

ಕಾವೇರಿ ನದಿ ಪಾತ್ರದಲ್ಲಿ ಮಳೆ (Rain) ಪ್ರಮಾಣ ಕುಸಿದಿದೆ. ಕಳೆದ ವರ್ಷ ಈ ಸಮಯದಲ್ಲಿ ಹೇಮಾವತಿಯಲ್ಲಿ 80 ಅಡಿ ನೀರು ಇತ್ತು. ಈ ವರ್ಷ 40 ಅಡಿಗೆ ಕುಸಿದಿದೆ. ಕೆಆರ್‌ಎಸ್‌ನಲ್ಲಿ 100 ಅಡಿ ಇದ್ದ ನೀರಿನ ಪ್ರಮಾಣ ಈಗ 22 ಅಡಿಯಷ್ಟಿದೆ, ಕಬಿನಿಯಲ್ಲಿ 79 ಅಡಿ ಇತ್ತು, ಈಗ 26 ಅಡಿಯಷ್ಟು ನೀರು ಇದೆ. ಈ ಅಣೆಕಟ್ಟೆಗಳಲ್ಲಿ ಒಳಹರಿವಿನ ಪ್ರಮಾಣ 20% ಗೆ ಕುಸಿದಿದೆ. ಹೀಗಾಗಿ ಸಮಸ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದು ವಿವರಿಸಿದರು.

 

ನೀರು ಬಿಡುವ ವಿಚಾರದಲ್ಲಿ ರೈತರು ಒತ್ತಡ ಹಾಕಬೇಡಿ. ಮುಂದಿನ ದಿನಗಳಲ್ಲಿ ಮಳೆ ಗಮನದಲ್ಲಿಟ್ಟುಕೊಂಡು ಬೆಳೆ ಹಾಕಿ. ಮಳೆ ಬಂದರೆ ನಾವು ನೀರನ್ನು ಒದಗಿಸಿಕೊಡುತ್ತೇವೆ. ಬರದ ಪರಿಸ್ಥಿತಿ ಎದುರಿಸಲು ಸಚಿವರಿಗೆ 2-3 ಜಿಲ್ಲೆಗಳ ಉಸ್ತುವಾರಿ ವಹಿಸಲಾಗಿದ್ದು, ನಾನು 4 ವಿಭಾಗಗಳಿಗೆ ತೆರಳಿ ಪರಿಶೀಲನೆ ಮಾಡುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಗೃಹಜ್ಯೋತಿ ಪುನರ್ ಪರಿಶೀಲನೆ – ಕೈಕೊಟ್ಟ ಸಾಫ್ಟ್‌ವೇರ್‌, ಜೆಸ್ಕಾಂ ಸಿಬ್ಬಂದಿ ಹೈರಾಣು

 

ಪ್ರಧಾನ ಮಂತ್ರಿಯವರು ಈಗಾಗಲೇ ನೀರು ಹಾಗೂ ವಿದ್ಯುತ್ ವಿಚಾರವಾಗಿ ಎಚ್ಚರಿಕೆ ನೀಡಿದ್ದಾರೆ. ದೇಶದಲ್ಲೇ ಭೀಕರ ಬರಗಾಲ ಬರಲಿದೆ ಎಂದು ಕೇಂದ್ರ ಸರ್ಕಾರ ಸಂದೇಶ ನೀಡಿದೆ. ವಿದ್ಯುತ್ ವಿಚಾರವಾಗಿ ಇಂಧನ ಇಲಾಖೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ. ನಾವು ಈ ಸಂದರ್ಭದಲ್ಲಿ ಎಚ್ಚರಿಕೆಯಿಂದ ಇರಬೇಕು. ಮೇವು ಹಾಗೂ ಕುಡಿಯುವ ನೀರಿನ ವಿಚಾರವಾಗಿ ಜಿಲ್ಲಾ ಸಚಿವರಿಗೆ ಪ್ರವಾಸ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ. ತುರ್ತಾಗಿ ಕೊಳವೆ ಬಾವಿ ಕೊರೆಯಲು ಸೂಚಿಸಲಾಗಿದೆ ಎಂದು ಹೇಳಿದರು

   SHARE  

Facebook
Twitter
Telegram
WhatsApp

   TOP NEWS  

   RECENT NEWS