ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್ (KSDL) ಶ್ರೀಗಂಧದ ಮರಗಳ ಕಳ್ಳತನವನ್ನು ತಡೆಗಟ್ಟಲು ಅತ್ಯಾಧುನಿಕ ತಾಂತ್ರಿಕ ಮೊರೆ ಹೋಗಲು ನಿರ್ಧರಿಸಿದ್ದು, ಇದು ಶ್ರೀಗಂಧ ಬೆಳೆಗಾರರಲ್ಲಿ ಹೊಸ ಭರವಸೆ ಮೂಡಿಸಿದೆ. ಬೆಲೆಬಾಳುವ ಶ್ರೀಗಂಧದ ಮರಗಳನ್ನು ಕಳ್ಳರಿಂದ ರಕ್ಷಿಸಲು ಸ್ಮಾರ್ಟ್ ತಂತ್ರಜ್ಞಾನಗಳು ಮತ್ತು ನವೀನ ಐಡಿಯಾಗಳನ್ನು ನೀಡುವಂತೆ ತಾಂತ್ರಿಕ ಸಂಸ್ಥೆಗಳಿಗೆ ಕೆಎಸ್ಡಿಎಲ್ ಆಹ್ವಾನ ನೀಡಿದೆ. ಮರಗಳಿಗೆ ಚಿಪ್ ಅಳವಡಿಕೆ, ಸೆನ್ಸರ್ ಆಧಾರಿತ ಅಲರ್ಟ್ ಸಿಸ್ಟಮ್ ಅಥವಾ ಜಿಪಿಎಸ್ ಟ್ರ್ಯಾಕಿಂಗ್ನಂತಹ ಸುಧಾರಿತ ವ್ಯವಸ್ಥೆಗಳನ್ನು ಜಾರಿಗೆ ತರುವ ಮೂಲಕ ಕಳ್ಳತನಕ್ಕೆ ಶಾಶ್ವತ ಕಡಿವಾಣ ಹಾಕುವ ಉದ್ದೇಶವನ್ನು ಸಂಸ್ಥೆ ಹೊಂದಿದೆ.
ರೈತರಿಗೆ ಶ್ರೀಗಂಧ ಬೆಳೆಯಲು ಆಸಕ್ತಿ ಇದ್ದರೂ, ಮರಗಳು ದೊಡ್ಡದಾದಂತೆ ಕಳ್ಳರ ಕಾಟ ಹೆಚ್ಚಾಗುತ್ತದೆ ಎಂಬ ಭಯದಿಂದ ಅನೇಕರು ಹಿಂದೆ ಸರಿಯುತ್ತಿದ್ದರು. ಈಗ ಸರ್ಕಾರ ಮತ್ತು ಕೆಎಸ್ಡಿಎಲ್ ಜಂಟಿಯಾಗಿ ಭದ್ರತಾ ಸಮಸ್ಯೆಗಳಿಗೆ ತಾಂತ್ರಿಕ ಪರಿಹಾರ ಕಂಡುಕೊಳ್ಳುತ್ತಿರುವುದು ರೈತರಿಗೆ ದೊಡ್ಡ ಸಿಹಿಸುದ್ದಿಯಾಗಿದೆ. ಈ ಯೋಜನೆಯಡಿ, ಮರವನ್ನು ಕಡಿಯಲು ಪ್ರಯತ್ನಿಸಿದಾಗ ಅಥವಾ ಮರದ ಬಳಿ ಅನುಮಾನಾಸ್ಪದ ಚಲನವಲನ ಕಂಡುಬಂದಾಗ ತಕ್ಷಣವೇ ಮಾಲೀಕರಿಗೆ ಮತ್ತು ಹತ್ತಿರದ ಪೊಲೀಸ್ ಠಾಣೆಗೆ ಸಂದೇಶ ರವಾನೆಯಾಗುವಂತಹ ವ್ಯವಸ್ಥೆಗಳನ್ನು ಅಳವಡಿಸಲು ಯೋಜಿಸಲಾಗಿದೆ.
ಈ ತಾಂತ್ರಿಕ ಸುಧಾರಣೆಯು ಕರ್ನಾಟಕದ ‘ಗಂಧದ ಗುಡಿ’ ಎಂಬ ಕೀರ್ತಿಯನ್ನು ಮರುಸ್ಥಾಪಿಸಲು ಸಹಕಾರಿಯಾಗಲಿದೆ. ಶ್ರೀಗಂಧದ ಬೆಳೆ ಸುಕ್ಷೇಪವಾಗಿದೆ ಎಂಬ ನಂಬಿಕೆ ಮೂಡಿದರೆ ರಾಜ್ಯದ ಕೃಷಿ ವಲಯದಲ್ಲಿ ಶ್ರೀಗಂಧದ ಕೃಷಿ ಒಂದು ಲಾಭದಾಯಕ ಉದ್ಯಮವಾಗಿ ಬೆಳೆಯಲಿದೆ. ಕೆಎಸ್ಡಿಎಲ್ ಕೇವಲ ಮಾರುಕಟ್ಟೆ ಒದಗಿಸುವುದು ಮಾತ್ರವಲ್ಲದೆ, ತಂತ್ರಜ್ಞಾನದ ಮೂಲಕ ಬೆಳೆಗೂ ರಕ್ಷಣೆ ನೀಡಲು ಮುಂದಾಗಿರುವುದು ಪರಿಸರ ಸಂರಕ್ಷಣೆ ಮತ್ತು ರೈತರ ಆರ್ಥಿಕ ಸಬಲೀಕರಣ ಎರಡಕ್ಕೂ ಪೂರಕವಾಗಿದೆ. ಈ ಹೊಸ ಪ್ಲ್ಯಾನ್ ಶೀಘ್ರದಲ್ಲೇ ಕಾರ್ಯರೂಪಕ್ಕೆ ಬರಲಿದ್ದು, ಶ್ರೀಗಂಧದ ಅಕ್ರಮ ದಂಧೆಗೆ ಇದು ಮೃತ್ಯುಪ್ರಾಯವಾಗಲಿದೆ.










