ಸುಡುವ ಬೇಸಿಗೆಯ ಬಿಸಿಲಿನಲ್ಲಿ ಮಸಾಲೆ ಪದಾರ್ಥಗಳಿಗಿಂತ ಹೆಚ್ಚಾಗಿ ಹೊಟ್ಟೆಗೆ ತಂಪು ನೀಡುವ ಆಹಾರ ಸೇವಿಸುವುದು ಅತ್ಯಗತ್ಯ. ಬೆಳಗಿನ ಉಪಹಾರಕ್ಕೆ ಅಥವಾ ಮಧ್ಯಾಹ್ನದ ಊಟಕ್ಕೆ ಅತಿ ಸುಲಭವಾಗಿ ಮಾಡಬಹುದಾದ ‘ದಧಿ ಅನ್ನ’ ಅಥವಾ ಮೊಸರನ್ನ ಅತ್ಯುತ್ತಮ ಆಯ್ಕೆಯಾಗಿದೆ. ಇದು ಕೇವಲ ಹೊಟ್ಟೆಯನ್ನು ತಂಪಾಗಿರಿಸುವುದು ಮಾತ್ರವಲ್ಲದೆ, ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಿ ದಿನವಿಡೀ ನಿಮ್ಮನ್ನು ಚೈತನ್ಯದಿಂದ ಕೂಡಿರುವಂತೆ ಮಾಡುತ್ತದೆ.
ಮೊಸರನ್ನದ ರುಚಿಯನ್ನು ಹೆಚ್ಚಿಸಲು ಅದಕ್ಕೆ ಒಗ್ಗರಣೆ ನೀಡುವುದು ಬಹಳ ಮುಖ್ಯ. ಸ್ವಲ್ಪ ಎಣ್ಣೆ ಅಥವಾ ತುಪ್ಪಕ್ಕೆ ಸಾಸಿವೆ, ಜೀರಿಗೆ, ಕಡ್ಲೆಬೇಳೆ, ಉದ್ದಿನಬೇಳೆ, ಹೆಚ್ಚಿದ ಹಸಿಮೆಣಸಿನಕಾಯಿ ಮತ್ತು ಕರಿಬೇವಿನ ಎಲೆಗಳನ್ನು ಹಾಕಿ ತಯಾರಿಸಿದ ಒಗ್ಗರಣೆಯು ಅನ್ನಕ್ಕೆ ವಿಶೇಷ ಸ್ವಾದ ನೀಡುತ್ತದೆ. ಜೊತೆಗೆ ಸಣ್ಣಗೆ ಹೆಚ್ಚಿದ ಶುಂಠಿ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸುವುದರಿಂದ ಇದು ಹಸಿವನ್ನು ಹೆಚ್ಚಿಸುವುದಲ್ಲದೆ ಶರೀರದ ಉಷ್ಣತೆಯನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ.
ಇನ್ನು ಹೆಚ್ಚಿನ ಪೌಷ್ಟಿಕಾಂಶ ಬೇಕೆನ್ನುವವರು ಮೊಸರನ್ನಕ್ಕೆ ದಾಳಿಂಬೆ ಕಾಳುಗಳು, ದ್ರಾಕ್ಷಿ ಅಥವಾ ತುರಿದ ಕ್ಯಾರೆಟ್ ಅನ್ನು ಸೇರಿಸಬಹುದು. ಇದು ನೋಡಲು ಆಕರ್ಷಕವಾಗಿರುವುದಲ್ಲದೆ ಮಕ್ಕಳಿಗೂ ತುಂಬಾ ಇಷ್ಟವಾಗುತ್ತದೆ. ಬೇಸಿಗೆಯಲ್ಲಿ ಕಾಡುವ ನಿರ್ಜಲೀಕರಣ (Dehydration) ಸಮಸ್ಯೆಯಿಂದ ಪಾರಾಗಲು ಮತ್ತು ದೇಹದ ಒಳಗಿನ ಉಷ್ಣತೆಯನ್ನು ಕಡಿಮೆ ಮಾಡಲು ಈ ರೈಸ್ ಐಟಂ ರಾಮಬಾಣದಂತೆ ಕೆಲಸ ಮಾಡುತ್ತದೆ. ಊಟದ ಕೊನೆಯಲ್ಲಿ ಒಂದು ಬಟ್ಟಲು ತಣ್ಣನೆಯ ಮೊಸರನ್ನವಿದ್ದರೆ ಆ ತೃಪ್ತಿಯೇ ಬೇರೆ.










