ಕನ್ನಡ ಚಿತ್ರರಂಗದಲ್ಲಿ ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಅವಿನಾಭಾವ ಬಾಂಧವ್ಯವನ್ನು ಸಾರುವ ಮತ್ತೊಂದು ಸುಂದರ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಅದೇ ‘ಯಾವ ಮೋಹನ ಮುರಳಿ ಕರೆಯಿತು’. ಶ್ವಾನ ಪ್ರೇಮಿಗಳ ಕಣ್ಮನ ಸೆಳೆಯುವ ವಿಶೇಷ ಉದ್ದೇಶದಿಂದ ನಿರ್ಮಾಣವಾಗಿರುವ ಈ ಎಮೋಷನಲ್, ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರವು ಇದೇ ಬರುವ ಮಾರ್ಚ್ 27ರಂದು (2026) ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ‘ಚಾರ್ಲಿ 777’ ಸಿನಿಮಾದ ರೀತಿಯಲ್ಲಿಯೇ ಇದೂ ಕೂಡ ಪ್ರಾಣಿ ಪ್ರಿಯರ ಹಾಗೂ ಪ್ರೇಕ್ಷಕರ ಮನಸ್ಸನ್ನು ಆಳವಾಗಿ ತಟ್ಟುವ ಭರವಸೆಯನ್ನು ಮೂಡಿಸಿದೆ.
ನಿರ್ದೇಶಕ ವಿಶ್ವಾಸ್ ಕೃಷ್ಣ ಅವರು ಆಕ್ಷನ್ ಕಟ್ ಹೇಳಿರುವ ಈ ಸಿನಿಮಾದಲ್ಲಿ, ಕಾಲು ಸ್ವಾಧೀನ ಕಳೆದುಕೊಂಡಿರುವ ಅಂಗವಿಕಲ ಬಾಲಕಿಗೆ ಆಶ್ರಮದಲ್ಲಿ ಒಂದು ನಾಯಿ ಸಿಗುತ್ತದೆ. ತದನಂತರ ಅವರಿಬ್ಬರ ನಡುವೆ ಬೆಳೆಯುವ ಭಾವನಾತ್ಮಕ ನಂಟು ಮತ್ತು ಎದುರಾಗುವ ಸವಾಲುಗಳೇ ಚಿತ್ರದ ಜೀವಾಳ. ಚಿತ್ರದಲ್ಲಿ ನಿರ್ಮಾಪಕ ಶರಣಪ್ಪ ಗೌರಮ್ಮ ಅವರ ಪುತ್ರಿ, ಅಂತರರಾಷ್ಟ್ರೀಯ ಮಟ್ಟದ ಕಿಕ್ ಬಾಕ್ಸಿಂಗ್ ಪಟುವಾಗಿರುವ ಕುಮಾರಿ ಪ್ರಕೃತಿ ಮುಖ್ಯ ಭೂಮಿಕೆಯಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ಇವರೊಂದಿಗೆ ಮಾಧವ, ಸ್ವಪ್ನಾ ಶೆಟ್ಟಿಗಾರ್ ಹಾಗೂ ಪಟೇಲ್ ವರುಣ್ ರಾಜ್ ಮುಂತಾದ ಕಲಾವಿದರು ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ.
ಈ ಚಿತ್ರದ ಅತಿ ಮುಖ್ಯ ಆಕರ್ಷಣೆ ಎಂದರೆ ಇದರಲ್ಲಿ ನಟಿಸಿರುವ ಮುದ್ದಾದ ಶ್ವಾನಗಳು. ಸಿನಿಮಾದಲ್ಲಿ ‘ರಾಕಿ’ ಮತ್ತು ‘ರಾಣಾ’ ಎಂಬ ಎರಡು ನಾಯಿಗಳು ಕಾಣಿಸಿಕೊಂಡಿವೆ. ಚಿತ್ರೀಕರಣ ಬಹುತೇಕ ಮುಗಿಯುವ ಹಂತದಲ್ಲಿದ್ದಾಗ ‘ರಾಕಿ’ ನಾಯಿ ಆಕಸ್ಮಿಕವಾಗಿ ಮೃತಪಟ್ಟಾಗ, ಅದರ ಜಾಗಕ್ಕೆ ಚಿತ್ರತಂಡವೇ ಬೆಳೆಸಿದ ‘ರಾಣಾ’ ಎಂಬ ಮತ್ತೊಂದು ನಾಯಿಗೆ ವಿಶೇಷ ತರಬೇತಿ ನೀಡಿ ಕ್ಲೈಮ್ಯಾಕ್ಸ್ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಮಲೆನಾಡಿನ ಹಸಿರು ವಾತಾವರಣದಲ್ಲಿ ಸೆರೆಹಿಡಿಯಲಾಗಿರುವ ಈ ಸಿನಿಮಾ, ಕುಟುಂಬ ಸಮೇತ ಕುಳಿತು ನೋಡಬಹುದಾದ ಒಂದು ಸುಂದರ ಚಿತ್ರವಾಗಿ ಹೊರಹೊಮ್ಮಿದೆ.









